ADVERTISEMENT

ಸೇವೆ ನಿಲ್ಲಿಸಿದ ಕೃಷಿ ಯಂತ್ರಧಾರೆ: ರೈತರಿಗೆ ಸಂಕಷ್ಟ

ಕೃಷ್ಣಮೂರ್ತಿ
Published 6 ಜನವರಿ 2021, 3:47 IST
Last Updated 6 ಜನವರಿ 2021, 3:47 IST
ಕೆಜಿಎಫ್ ಸಮೀಪದ ಕ್ಯಾಸಂಬಳ್ಳಿ ಕೃಷಿ ಯಂತ್ರ ಧಾರೆ ಕೇಂದ್ರದಲ್ಲಿರುವ ಟ್ರಾಕ್ಟರ್‌ಗಳು
ಕೆಜಿಎಫ್ ಸಮೀಪದ ಕ್ಯಾಸಂಬಳ್ಳಿ ಕೃಷಿ ಯಂತ್ರ ಧಾರೆ ಕೇಂದ್ರದಲ್ಲಿರುವ ಟ್ರಾಕ್ಟರ್‌ಗಳು   

ಕೆಜಿಎಫ್: ರೈತರ ಕೃಷಿ ಭೂಮಿಯಲ್ಲಿ ಬಳಸಬೇಕಾದ ಯಂತ್ರಗಳನ್ನು ಕಡಿಮೆ ದರದಲ್ಲಿ ಬಾಡಿಗೆ ಕೊಡುವ ಕೃಷಿ ಇಲಾಖೆಯ ಕೃಷಿ ಯಂತ್ರಧಾರೆ ಯೋಜನೆ ಕ್ಯಾಸಂಬಳ್ಳಿಯಲ್ಲಿ ವಿಫಲವಾಗಿದ್ದು, ರೈತರು ಸಂಕಷ್ಟವನ್ನು ಅನುಭವಿಸುವಂತಾಗಿದೆ.

ನಾಲ್ಕು ವರ್ಷಗಳ ಹಿಂದೆ ಕೃಷಿಗೆ ಸಂಬಂಧಿಸಿದ ಯಂತ್ರಗಳನ್ನು ರೈತರಿಗೆ ಬಾಡಿಗೆಗೆ ಕೊಡಲು ಕೃಷಿ ಇಲಾಖೆ ಜಾನ್ಡೀರ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ನಾಲ್ಕು ಟ್ರಾಕ್ಟರ್ ಸೇವೆಯನ್ನು ನೀಡಬೇಕಾಗಿದ್ದ ಕಂಪನಿ ಕೇವಲ ಒಂದು ಟ್ರಾಕ್ಟರ್‌ನ್ನು ರೈತರಿಗೆ ನೀಡುತ್ತಿದೆ. ಅದು ಕೂಡ ನಿಯಮಿತವಾಗಿಲ್ಲ. ಟ್ರಾಕ್ಟರ್‌ಗೆ ನೇಮಿಸಿಕೊಂಡಿರುವ ಚಾಲಕ ಕೈಕೊಟ್ಟರೆ, ಅಂದು ಟ್ರಾಕ್ಟರ್ ಸೇವೆ ರೈತರಿಗೆ ಸಿಗುವುದಿಲ್ಲ. ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ದರ ನಿಗದಿ ಪಟ್ಟಿ ಇಲ್ಲ. ಸಿಬ್ಬಂದಿ ಕೂಡ ಇರುವುದಿಲ್ಲ ಎಂದು ಕ್ಯಾಸಂಬಳ್ಳಿ ಮತ್ತು ಸುತ್ತಮುತ್ತಲಿನ ರೈತರು ಆರೋಪಿಸುತ್ತಾರೆ.

ADVERTISEMENT

ಈಗ ಒಂದು ಟ್ರಾಕ್ಟರ್ ಮಾತ್ರ ಇದೆ. ಅದೂ ಕೂಡ ದುರಸ್ತಿಯಲ್ಲಿದೆ. ರಾಗಿ ಬೆಳೆ ಮುಗಿದಿದೆ. ಭೂಮಿ ಹದ ಮಾಡಲು ಟ್ರಾಕ್ಟರ್ ಬೇಕಾಗಿದೆ. ಅನೇಕ ಬಾರಿ ಕೇಂದ್ರಕ್ಕೆ ಬಂದು ಹೋಗಿದ್ದೇನೆ. ಒಂದಲ್ಲ ಒಂದು ನೆಪ ಹೇಳಿ ಸಾಗಿ ಹಾಕುತ್ತಿದ್ದಾರೆ. ಟ್ರಾಕ್ಟರ್ ಮಾತ್ರ ಸಿಗುತ್ತಿಲ್ಲ ಎಂದು ರೈತರೂ ಆಗಿರುವ ಶಿಕ್ಷಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ರೈತರು ಉಪಯೋಗಿಸಬಹುದಾಗಿದ್ದ ಸೀಡ್ ಕಂ ಫರ್ಟಿಲೈಸರ್ ಡ್ರಿಲ್, ರೊಟೊವೇಟರ್, ಕಲ್ಟಿವೇಟರ್ಸ್, ಫರೋ ಆಪರೇಟರ್, ಬ್ಲೇಡ್, ಡಿಸ್ಕ್ ಮೊದಲಾದ ಉಪಕರಣಗಳನ್ನು ಹೊಂದಿದ ಟ್ರಾಕ್ಟರ್‌ಗಳನ್ನು ಕಂಪನಿ ರೈತರಿಗೆ ನೀಡಬೇಕಾಗಿತ್ತು. ರೊಟೋವೇಟರ್ ಹೊಂದಿದ ಟ್ರಾಕ್ಟರ್‌ಗೆ ಪ್ರತಿ ಗಂಟೆಗೆ ₹700 ನಿಗದಿ ಮಾಡಲಾಗಿತ್ತು. ರೈತರು ಉಳುಮೆ ಮಾಡಲು
ಕೃಷಿಯಂತ್ರ ಧಾರೆ ಕೇಂದ್ರಕ್ಕೆ ಬಂದು ಟ್ರಾಕ್ಟರ್‌ಗಳನ್ನು ಅದರ ಚಾಲಕನ ಸಮೇತ ತಮ್ಮ ಜಮೀನಿಗೆ ಕರೆದುಕೊಂಡು ಹೋಗಬಹುದಾಗಿತ್ತು. ಹೆಚ್ಚುವರಿ ರೈತರು ಸೇವೆ ಕೇಳಿದರೆ ಆದ್ಯತೆ ಮೇರೆಗೆ ಟ್ರಾಕ್ಟರ್
ಕಳಿಸಲಾಗುತ್ತಿತ್ತು.

ಕಡ್ಲೆಕಾಯಿ, ಟೊಮೆಟೊ ಮತ್ತು ಆಲೂಗಡ್ಡೆ ಉಳುಮೆ ಮಾಡಲು ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಕೃಷಿ ಸಮಯದಲ್ಲಿ ಒಮ್ಮೆಲೆ ಟ್ರಾಕ್ಟರ್‌ಗಳಿಗೆ ಬೇಡಿಕೆ ಬಂದಾಗ, ಖಾಸಗಿ ಟ್ರಾಕ್ಟರ್ ಮಾಲೀಕರು ಬೆಲೆಯನ್ನು ಏರಿಸುತ್ತಿದ್ದರು. ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಖಾಸಗಿ ಟ್ರಾಕ್ಟರ್ ಗಳನ್ನು ಬಾಡಿಗೆಗೆ ಪಡೆಯಲು ಕಷ್ಟವಾಗುತ್ತಿತ್ತು.

ಗುತ್ತಿಗೆ ಪಡೆದಿರುವ ಕಂಪನಿ ವಿರುದ್ಧ ರೈತರು ದೂರುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಸಾಲಿನಲ್ಲಿ 492 ಫಲಾನುಭವಿಗಳು ಕೇಂದ್ರದ ಉಪಯೋಗ ಪಡೆದಿದ್ದಾರೆ ಎಂದು ಕೃಷಿ ಅಧಿಕಾರಿ ಅಕ್ಷಯ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.