ಮುಳಬಾಗಿಲು: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಾ.21ರಂದು ಶಿವಮೊಗ್ಗದಲ್ಲಿ ನಡೆಯಲಿರುವ ಮಹಾ ಪಂಚಾಯತ್ ಬೃಹತ್ ಸಮಾವೇಶಕ್ಕೆ ಜಿಲ್ಲೆಯಿಂದ 1,000 ರೈತರು ತೆರಳಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ಐತಿಹಾಸಿಕ ದೆಹಲಿ ಹೋರಾಟವು 100 ದಿನಗಳನ್ನು ಪೂರೈಸಿ ನಡೆಯುತ್ತಿದ್ದರೂ ಕೇಂದ್ರ ಸರ್ಕಾರವು ಅತ್ತ ಗಮನ ನೀಡುತ್ತಿಲ್ಲ. ಬದಲಿಗೆ ಹೋರಾಟವನ್ನು ದಮನಿಸಲು ವಿದ್ಯುತ್, ನೀರು ಪೂರೈಕೆ ಸ್ಥಗಿತಗೊಳಿಸಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೊಳೆಗಳನ್ನು ಹೊಡೆಯುವಂತಹ ರೈತ ವಿರೋಧಿ ಧೋರಣೆಗಳಿಗೆ ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ಹೋರಾಟದ ಬೆಂಬಲವಾಗಿ ಮತ್ತು ಪೆಟ್ರೋಲ್-ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗಳನ್ನು ಖಂಡಿಸಿ ಶಿವಮೊಗ್ಗದಲ್ಲಿ ಮಾ.21ರಂದು ಮಹಾ ಪಂಚಾಯತ್ ಬೃಹತ್ ಸಮಾವೇಶವನ್ನು ರಾಷ್ಟ್ರೀಯ ಮುಖಂಡರಾದ ಅಜಿತ್, ರಾಕೇಶ್ ಟಿಕಾಯತ್ ಮತ್ತಿತರ ನೇತೃತ್ವದಲ್ಲಿ ನಡೆಸುತ್ತಿದ್ದು, ಜಿಲ್ಲೆಯಿಂದ 1000 ಸಾವಿರ ರೈತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ಫಾರೂಕ್ ಪಾಷ, ಹಸಿರುಸೇನೆ ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ವಿಜಯ್ಪಾಲ್ ಜುಬೇದ್ ಪಾಷ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಈಕಂಬಳ್ಳಿ ಮಂಜುನಾಥ್, ನಲ್ಲಾಂಡಹಳ್ಳಿ ಕೇಶವನ, ಸುಪ್ರೀಂಚಲ, ನವೀನ್, ಪುತ್ತೇರಿ ರಾಜು, ಹೆಬ್ಬಣಿ ಆನಂದರೆಡ್ಡಿ, ನಂಗಲಿ ಕಿಶೋರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.