ಕೋಲಾರ: ‘ಬಲಿಜ ಸಮುದಾಯಕ್ಕೆ 3ಎ ನಿಂದ 2ಎಗೆ ವರ್ಗಾಯಿಸಬೇಕು ಎಂಬ ಹೋರಾಟಕ್ಕೆ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು ಇದನ್ನು ಸ್ವಾಗತಿಸುತ್ತೇವೆ. ಆದರೆ ಇದನ್ನು ಕೆಲವರು ತಾವೇ ಮಾಡಿಸಿದ್ದಾಗಿ ಹೇಳಿಕೊಳ್ಳುತ್ತಿರುವುದು ಸರಿಯಲ್ಲ’ ಎಂದು ಮುಳಬಾಗಿಲು ಬಲಿಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕಲ್ಲುಪಲ್ಲಿ ಪ್ರಕಾಶ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಒದಗಿಸಬೇಕು ಎಂದು ರಾಜ್ಯ ಬಲಿಜ ಮಹಾ ಸಭಾ ಅಧ್ಯಕ್ಷ ಪಿ.ಸಿ.ಮೋಹನ್ ಮತ್ತು ಸಮುದಾಯದ ಮುಖಂಡರ ಸತತ ಪ್ರಯತ್ನದಿಂದ ಜಯ ಸಿಕ್ಕಿದೆ. ಇದಕ್ಕೆ ಸಮುದಾಯದ ಕೆಲ ಮುಖಂಡರು ಅಪಪ್ರಚಾರ ನಡೆಸುವುದು ಸರಿಯಲ್ಲ’ ಎಂದರು.
‘ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಕಾಲದಲ್ಲಿ ಹಿಂದುಳಿದ ಬಲಿಜ ಜನಾಂಗವನ್ನು ಯಾವುದೇ ಸೂಕ್ತ ಕಾರಣವಿಲ್ಲದೆ ಅತ್ಯಂತ ಅವೈಜ್ಞಾನಿಕವಾಗಿ ಎ2 ನಿಂದ 3ಎಗೆ ವರ್ಗಾಯಿಸಲಾಗಿತ್ತು. ಆಗ ಆಡಳಿತ ಪಕ್ಷವಿದ್ದ ಕಾಂಗ್ರೆಸ್ನಲ್ಲಿ ಬಲಿಜ ಜನಾಂಗದ ಶಾಸಕರು ಇದೇ ವರ್ಗಕ್ಕೆ ಸೇರಿದವರಿದ್ದರೂ ಮೀಸಲಾತಿ ವಿಚಾರದಲ್ಲಿ ಧ್ವನಿ ಎತ್ತಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘2017ರಲ್ಲಿ ಬೆಂಗಳೂರು ಅರಮನೆ ಮೈಧಾನದಲ್ಲಿ ನಡೆದ ಬಲಿಜ ಸಮ್ಮೇಳನದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಮುಂತಾದವರು ಭಾಗವಹಿಸಿದ್ದರು, ಆದರೆ ಯಡಿಯೂರಪ್ಪ ಅವರನ್ನು ಹೊರತು ಪಡಿಸಿ ಮೀಸಲಾತಿಯಲ್ಲಿ ಬಲಿಜ ಜನಾಂಗಕ್ಕೆ ಆಗಿರುವ ಅನ್ಯಾಯದ ಬಗ್ಗೆ ಯಾರೂ ಮಾತಾಡಲಿಲ್ಲ’ ಎಂದು ದೂರಿದರು.
‘ಬಲಿಜ ಮಹಾಸಭಾದ ಅಧ್ಯಕ್ಷ ಪಿ.ಸಿ.ಮೋಹನ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.
ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಲ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎನ್.ಪ್ರಭಾಕರ್, ನಗರಸಭೆ ಮಾಜಿ ಸದಸ್ಯ ಸತೀಶ್ ಕುಮಾರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.