ADVERTISEMENT

ದೊಡ್ಡ ಕೆರೆಗೆ ನೀರು ಬಂದರೆ ಮಾತ್ರ ಸಮಸ್ಯೆ ನಿವಾರಣೆ

ಶಾಸಕ ಕೆ.ವೈ.ನಂಜೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 5:43 IST
Last Updated 25 ಜೂನ್ 2020, 5:43 IST
ಮಾಲೂರು ಪಟ್ಟಣದ ಆದರ್ಶ ನಗರದಲ್ಲಿ ರಸ್ತೆ ಡಾಂಬರಿಕರಣ ಕಾಮಗಾರಿಯನ್ನು ಶಾಸಕ ಕೆ.ವೈ.ನಂಜೇಗೌಡ ವಿಕ್ಷಿಸಿದರು
ಮಾಲೂರು ಪಟ್ಟಣದ ಆದರ್ಶ ನಗರದಲ್ಲಿ ರಸ್ತೆ ಡಾಂಬರಿಕರಣ ಕಾಮಗಾರಿಯನ್ನು ಶಾಸಕ ಕೆ.ವೈ.ನಂಜೇಗೌಡ ವಿಕ್ಷಿಸಿದರು   

ಮಾಲೂರು: ಕೆ.ಸಿ.ವ್ಯಾಲಿ ನೀರು ಪಟ್ಟಣದ ದೊಡ್ಡ ಕೆರೆಗೆ ಹರಿದಾಗ ಮಾತ್ರ ಪಟ್ಟಣದ ಜನರ ಕುಡಿಯುವ ನೀರಿನ ಬವಣೆ ನಿವಾರಣೆಯಾಗುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಪಟ್ಟಣದ ಆದರ್ಶನಗರದಲ್ಲಿ ಬುಧವಾರ ಪುರಸಭೆಯ 14ನೇ ಹಣಕಾಸು ಯೋಜನೆ ಅಡಿ ₹20 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರ್ ಕಾಮಗಾರಿ ವೀಕ್ಷಿಸಿ ನಂತರ ಮಾತನಾಡಿದರು.

ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆಗೆ ಸರ್ಕಾರದಿಂದ ಸುಮಾರು ₹14 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪ್ರಥಮ ಹಂತದಲ್ಲಿ ₹8 ಕೋಟಿ ಬಿಡುಗಡೆಯಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಆದರೂ ಸಂಪೂರ್ಣವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಬೇಕಾದರೆ ಕೆ.ಸಿ.ವ್ಯಾಲಿ ನೀರು ದೊಡ್ಡ
ಕೆರೆಗೆ ಹರಿಯಬೇಕಾಗಿದೆ ಎಂದು ಹೇಳಿದರು.

ADVERTISEMENT

ನರಸಾಪುರ ಕೆರೆಯಿಂದ ತಾಲ್ಲೂಕಿನ ಶಿವಾರ ಪಟ್ಟಣ ಗ್ರಾಮದ ಕೆರೆಗೆ ಹರಿಯುತ್ತಿದ್ದ ಕೆ.ಸಿ.ವ್ಯಾಲಿ ಯೋಜನೆ ನೀರನ್ನು ನಿಲ್ಲಿಸಲಾಗಿತ್ತು. ಅದರ ಬಗ್ಗೆ ಹೋರಾಟ ನಡೆಸಿದ್ದರಿಂದ ಮತ್ತೆ 40 ಎಂಎಲ್‌ಡಿ ನೀರು ಶಿವಾರ ಪಟ್ಟಣ ಕೆರೆಗೆ ಹರಿಸಲಾಗುತ್ತಿದೆ. ನಂತರ ಬಾವನಹಳ್ಳಿ, ತಂಬಹಳ್ಳಿ, ಅಬ್ಬೇನಹಳ್ಳಿ ಮತ್ತು ಹಾರೋಹಳ್ಳಿ ಗ್ರಾಮದ ಕೆರೆಗಳಿಗೆ ನೀರು ತುಂಬಿದ ಮೇಲೆ ಮಾಲೂರಿನ ದೊಡ್ಡ ಕೆರೆಗೆ ನೀರು ಹರಿಸಲಾಗುವುದು ಎಂದು ಹೇಳಿದರು.

ಕೆರೆ ಅಂಗಳದಲ್ಲಿ ಪುರಸಭೆಯಿಂದ ಕೊರೆಯಿಸಿರುವ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಏರಿಕೆಯಾಗುತ್ತದೆ. ಇದರಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಯರಗೋಳು ಕುಡಿಯುವ ನೀರಿನ ಯೋಜನೆ ಕಾಮಗಾರಿ ಬರದಿಂದ ಸಾಗಿದ್ದು, ಮುಂದಿನ ಜನವರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಸಿ.ಲಕ್ಷ್ಮಿನಾರಾಯಣ್, ಪುರಸಭೆ ಸದಸ್ಯರಾದ ಪರಮೇಶ್, ಮಂಜುನಾಥ್, ಇನಾಯತ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ, ಮುಖಂಡರಾದ ಮಧುಸೂದನ್, ಕೋಳಿನಾರಾಯಣ್, ಗೋವರ್ಧನ್ ರೆಡ್ಡಿ ಪುರಸಭೆ ಎಂಜಿನಿಯರ್ ಮಂಜುನಾಥ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.