ADVERTISEMENT

ಇಬ್ಬರು ಆರೋಪಿಗಳು ಗಡಿಪಾರು

ಗೂಂಡಾ ಕಾಯ್ದೆ ದಾಖಲಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 5:39 IST
Last Updated 15 ಜನವರಿ 2023, 5:39 IST

ಕೋಲಾರ: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಮತ್ತು ಕಾನೂನು, ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆಗಳಿರುವುದರಿಂದ ಜಿಲ್ಲೆಯ ಇಬ್ಬರು ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಕೋಲಾರ ತಾಲ್ಲೂಕಿನ ವಕ್ಕಲೇರಿ ಗ್ರಾಮದ ಅರುಣ್‌ ಅಲಿಯಾಸ್‌ ಅರುಣ್‌ ಕುಮಾರ್‌ (28) ಹಾಗೂ ಖಾದ್ರಿಪುರ ಗ್ರಾಮದ ಶಿವರಾಜು (28) ಗಡಿಪಾರಿಗೆ ಒಳಗಾದವರು. ಅಲ್ಲದೇ, ಶಿವರಾಜು ಹಾಗೂ ಮತ್ತೊಬ್ಬ ಆರೋಪಿ, ಕೋಲಾರ ನಗರದ ಕಾರಂಜಿಕಟ್ಟೆಯ ಎಂ. ಮಂಜುನಾಥ್‌ ಅಲಿಯಾಸ್‌ ಕಚ್ಚಾ ಮಂಜು (37) ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಕೂಡ ಸಲ್ಲಿಸಿದ್ದಾರೆ.

ಅಮಾಯಕ ಜನರಿಗೆ ಬೆದರಿಸಿ, ಹಲ್ಲೆ ನಡೆಸಿ ನೆಮ್ಮದಿ ಹಾಳು ಮಾಡುವ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಅರುಣ್‌ ಹಾಗೂ ಶಿವರಾಜು ಅವರನ್ನು ಬೀದರ್‌ ಜಿಲ್ಲೆಯ ಔರಾದ್‌ ತಾಲ್ಲೂಕಿನ ಚಿಂತಾಕಿ ಪೊಲೀಸ್ ಠಾಣಾ ವ್ಯಾಪ್ತಿಗೆ 2024ರ ಜನವರಿ 9ರವರೆಗೆ ಗಡಿಪಾರು ಮಾಡಿ ಕೋಲಾರ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.

ADVERTISEMENT

ವಕ್ಕಲೇರಿಯ ಅರುಣ್‌ ವಿರುದ್ಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ನಾಲ್ಕು ಪ್ರಕರಣ ಹಾಗೂ ಶಿವರಾಜು ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದವು. ಎಂ. ಮಂಜುನಾಥ್‌ ವಿರುದ್ಧ ವಿವಿಧ ಠಾಣೆಗಳಲ್ಲಿ ಅಪಹರಣ, ರೈಸ್‌ ಪುಲ್ಲಿಂಗ್‌ ಹಾಗೂ ಸಮಾಜ ದ್ರೋಹಿ ಕೃತ್ಯ ಸೇರಿ 10 ಪ್ರಕರಣಗಳು ದಾಖಲಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.