ಮುಳಬಾಗಿಲು: ‘ರಾಮಾಯಣ ಮತ್ತು ಮಹಾಭಾರತ ವಿಶ್ವದಲ್ಲೇ ಶ್ರೇಷ್ಠ ಗ್ರಂಥಗಳಾಗಿವೆ. ಈ ಎರಡು ಕಾಲಘಟ್ಟದ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಅರಿವು ಇರಬೇಕಿದೆ’ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಆವಣಿ ಗ್ರಾಮದಲ್ಲಿ ಲವಕುಶ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಿಂದ ಸೋಮವಾರ ನಡೆದ ಶ್ರೀರಾಮಚಂದ್ರ ದೇವರ ಮಹಾಸಾಮ್ರಾಜ್ಯ ಪಟ್ಟಾಭಿಷೇಕ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಷ್ಟಶಕ್ತಿ ಎದುರಿಸಿ ಪುಣ್ಯ ಕಾರ್ಯವನ್ನು ಮಾಡುವಂತಹ ಒಳ್ಳೆಯ ಶಕ್ತಿಯನ್ನು ದೇವರು ನೀಡುತ್ತಾನೆ. ಪ್ರತಿನಿತ್ಯದ ಕಾರ್ಯ ಒತ್ತಡದ ಮಧ್ಯೆ ಒಂದಿಷ್ಟು ಸಮಯವನ್ನು ದೇವರ ಧ್ಯಾನ, ಸ್ಮರಣೆ, ಪೂಜೆಗೆ ಮೀಸಲಿಡಬೇಕು. ಆ ಮೂಲಕ ಸದ್ವಿಚಾರವಂತರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಆವಣಿ ಗ್ರಾಮ ರಾಮಾಯಣ ಕಾಲದಲ್ಲಿ ಅತ್ಯಂತ ಮಹತ್ವದ ಸ್ಥಾನವಾಗಿತ್ತು ಎಂಬ ಪ್ರತೀತಿ ಇದೆ. ವಾಲ್ಮೀಕಿ ಮುನಿಗಳ ಆಶ್ರಮ ಇಲ್ಲಿತ್ತು. ಸೀತೆಯು ವನವಾಸದ ಸಂದರ್ಭದಲ್ಲಿ ವಾಸ್ತವ್ಯವಿದ್ದರು. ಈ ಕ್ಷೇತ್ರದಲ್ಲಿ ಹೈದರಾಬಾದ್ ಮೂಲದ ಲವಕುಶ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಶ್ಯಾಮ್ ಪ್ರಸಾದ್ ರೆಡ್ಡಿ ತಂಡದವರು ಸೀತಾರಾಮ ಕಲ್ಯಾಣೋತ್ಸವ ಹಾಗೂ ಶ್ರೀರಾಮ ಮಹಾಸಾಮ್ರಾಜ್ಯ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಆ ಮೂಲಕ ಈ ಭಾಗದಲ್ಲಿ ರಾಮಾಯಣ ಮತ್ತು ರಾಮನ ಜೀವನ ಚರಿತ್ರೆಯನ್ನು ಜನರಿಗೆ ಪರಿಚಯಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್. ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜ್, ಜೆಡಿಎಸ್ ಮುಖಂಡ ಸಮೃದ್ಧಿ ವಿ. ಮಂಜುನಾಥ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆಲಂಗೂರು ಶಿವಣ್ಣ, ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಉಪಾಧ್ಯಕ್ಷ ಎನ್. ವೆಂಕಟರವಣಪ್ಪ, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಂಗಲಿ ವಿಶ್ವನಾಥರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಹೆಬ್ಬಣಿ ರವಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.