ಕೋಲಾರ: ತಾಲ್ಲೂಕಿನ ಚೌಡದೇನಹಳ್ಳಿಯಲ್ಲಿ ಮಂಗಳವಾರ ರಾತ್ರಿ ಗೋಡೆ ವಿಚಾರವಾಗಿ 2 ಕುಟುಂಬಗಳ ನಡುವೆ ನಡೆದ ಜಗಳ ಮುನಿರಾಜು (34) ಎಂಬುವರ ಕೊಲೆಯಲ್ಲಿ ಅಂತ್ಯವಾಗಿದೆ.
ಮುನಿರಾಜು ಮತ್ತು ಅವರ ಸಂಬಂಧಿಗಳಾದ ಮೋಹನ್ ಒಂದೇ ಮನೆಯಲ್ಲಿ ಭಾಗ ಮಾಡಿಕೊಂಡು ವಾಸವಾಗಿದ್ದರು. ಮನೆಗೆ ಮಧ್ಯೆ ಗೋಡೆ ಕಟ್ಟುವ ಸಂಬಂಧ ಈ ಹಿಂದೆ ಪರಸ್ಪರರ ಮಧ್ಯೆ ಹಲವು ಬಾರಿ ಜಗಳವಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗೋಡೆ ವಿಚಾರವಾಗಿ ಮುನಿರಾಜು ಮತ್ತು ಮೋಹನ್ ನಡುವೆ ರಾತ್ರಿ ಜಗಳವಾಗಿದೆ. ಈ ವೇಳೆ ಮೋಹನ್ ತನ್ನ ತಮ್ಮ ಮಧು ಹಾಗೂ ಸ್ನೇಹಿತ ಅರವಿಂದ್ ಜತೆ ಸೇರಿ ಮುನಿರಾಜು ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಮುನಿರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮುನಿರಾಜು ಕೂಲಿ ಕೆಲಸ ಮಾಡುತ್ತಿದ್ದರು. ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದು, ವೇಮಗಲ್ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.