ADVERTISEMENT

ತನಿಖೆ ಮಾಡಿಸುತ್ತೇವೆ: ಸಂಸದರ ಎಚ್ಚರಿಕೆ

ಟಮಕ ಉದ್ಯಾನ ಅಭಿವೃದ್ಧಿ ಕಾಮಗಾರಿ ಕಳಪೆ: ದೂರು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 15:59 IST
Last Updated 23 ಜೂನ್ 2021, 15:59 IST
ಸಂಸದ ಎಸ್‌.ಮುನಿಸ್ವಾಮಿ ಕೋಲಾರದ ಟಮಕ ಬಡಾವಣೆ 1ನೇ ಬ್ಲಾಕ್‌ನ ಉದ್ಯಾನದ ಕಾಮಗಾರಿಯನ್ನು ಬುಧವಾರ ಪರಿಶೀಲನೆ ಮಾಡಿದರು
ಸಂಸದ ಎಸ್‌.ಮುನಿಸ್ವಾಮಿ ಕೋಲಾರದ ಟಮಕ ಬಡಾವಣೆ 1ನೇ ಬ್ಲಾಕ್‌ನ ಉದ್ಯಾನದ ಕಾಮಗಾರಿಯನ್ನು ಬುಧವಾರ ಪರಿಶೀಲನೆ ಮಾಡಿದರು   

ಕೋಲಾರ: ಅಮೃತ್‌ಸಿಟಿ ಯೋಜನೆಯಡಿ ಕೈಗೊಂಡ ನಗರದ ಉದ್ಯಾನಗಳ ಅಭಿವೃದ್ಧಿ ಕಾಮಗಾರಿ ಗುಣಮಟ್ಟ ಕಳಪೆಯಾಗಿರುವ ಆರೋಪ ಕೇಳಿಬಂದಿದ್ದು, ಸಂಸದ ಎಸ್‌.ಮುನಿಸ್ವಾಮಿ ಅವರು ಟಮಕ ಬಡಾವಣೆ 1ನೇ ಬ್ಲಾಕ್‌ನ ಉದ್ಯಾನಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಟಮಕ ಬಡಾವಣೆ ಉದ್ಯಾನದ ಅಭಿವೃದ್ಧಿಗೆ ಅಮೃತ್‌ಸಿಟಿ ಯೋಜನೆಯಡಿ ಕೇಂದ್ರ ಸರ್ಕಾರ ₹ 1.20 ಕೋಟಿ ಬಿಡುಗಡೆ ಮಾಡಿತ್ತು. ಈ ಅನುದಾನ ಬಳಸಿಕೊಂಡು ಉದ್ಯಾನದಲ್ಲಿ ಮಾಡಿರುವ ಗ್ರಿಲ್ಸ್‌ ಅಳವಡಿಕೆ, ವಿದ್ಯುತ್‌ ದೀಪ ಅಳವಡಿಕೆ ಮತ್ತು ತಂಗುದಾಣಗಳ ಗುಣಮಟ್ಟ ಕಳಪೆಯಾಗಿದೆ ಎಂದು ಆರೋಪಿಸಿ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಅಧ್ಯಕ್ಷ ಓಂಶಕ್ತಿ ಚಲಪತಿ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದರು.

ಈ ದೂರು ಆಧರಿಸಿ ಪರಿಶೀಲನೆ ಮಾಡಿದ ಸಂಸದರು, ‘ಉದ್ಯಾನದ ಅಭಿವೃದ್ಧಿ ಕಾಮಗಾರಿ ಅಪೂರ್ಣವಾಗಿದ್ದರೂ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ. ಉದ್ಯಾನವನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಿಲ್ಲ. ತಿಂಗಳೊಳಗೆ ಗುಣಮಟ್ಟದ ಕಾಮಗಾರಿಯೊಂದಿಗೆ ಕೆಲಸ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ADVERTISEMENT

‘ಜಿಲ್ಲಾ ಕೇಂದ್ರದಲ್ಲಿನ 13 ಉದ್ಯಾನಗಳ ಅಭಿವೃದ್ಧಿಗೆ ಅಮೃತ್‌ ಸಿಟಿ ಯೋಜನೆಯಡಿ ₹ 9 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಗುತ್ತಿಗೆದಾರರಿಗೆ ಈಗಾಗಲೇ ಕಾಮಗಾರಿಯ ಬಿಲ್‌ ಪಾವತಿಸಲಾಗಿದೆ. ಆದರೆ, ನಗರಸಭೆ ಅಧ್ಯಕ್ಷರು ಆಯುಕ್ತರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಮತ್ತೊಂದೆಡೆ ಉದ್ಯಾನಗಳನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತನಿಖೆಗೆ ಆದೇಶಿಸುತ್ತೇವೆ: ‘ಗಿಡ ಮರ ಇಲ್ಲದಿದ್ದರೂ ಪಾರ್ಕ್ ಎಂದು ಹೇಳುವುದು ಹೇಗೆ? ಕುರುಡರನ್ನು ಕರೆದುಕೊಂಡು ಬಂದು ಇದನ್ನು ಉದ್ಯಾನವೆಂದು ಹೇಳಿದರೆ ನಂಬುವುದಿಲ್ಲ. ತಿಂಗಳೊಳಗೆ ಸಮರ್ಪಕವಾಗಿ ಉದ್ಯಾನಗಳನ್ನು ಅಭಿವೃದ್ಧಿಪಡಿಸದಿದ್ದರೆ ಅನುದಾನ ದುರ್ಬಳಕೆ ಆರೋಪದ ಮೇಲೆ ತನಿಖೆಗೆ ಆದೇಶಿಸುತ್ತೇವೆ’ ಎಂದು ಗುಡುಗಿದರು.

‘ಕೋಲಾರ ಮತ್ತು ಕೆಜಿಎಫ್ ನಗರಕ್ಕೆ ಅಮೃತ್‌ ಸಿಟಿ ಯೋಜನೆಯಲ್ಲಿ ₹ 140 ಕೋಟಿ ಅನುದಾನ ಬಂದಿದೆ. ಆದರೂ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದೆ. ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸೂಚಿಸಲಾಗಿದೆ. ಸರ್ಕಾರದ ಅನುದಾನ ದುರ್ಬಳಕೆ ಆಗಬಾರದು’ ಎಂದು ತಾಕೀತು ಮಾಡಿದರು.

‘ಉದ್ಯಾನಗಳಲ್ಲಿನ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಸಾರ್ವಜನಿಕರಿಗೆ ಸಾಕಷ್ಟು ದೂರು ಬಂದಿವೆ. ಕಾಮಗಾರಿಯ ಖರ್ಚು ವೆಚ್ಚದ ವಿವರ ಒಳಗೊಂಡ ಫಲಕ ಅಳವಡಿಸಬೇಕು. ಕಾಮಗಾರಿಯ ಖರ್ಚಿನ ಮಾಹಿತಿ ಸಾರ್ವಜನಿಕರಿಗೂ ಗೊತ್ತಾಗಬೇಕು. ಶಾಸಕರು, ನಗರಸಭೆ ಅಧ್ಯಕ್ಷರು ಸೇರಿದಂತೆ ಜನಪ್ರತಿನಿಧಿಗಳೆಲ್ಲಾ ಒಗ್ಗೂಡಿ ಈ ಅವ್ಯವಸ್ಥೆ ಸರಿಪಡಿಸಬೇಕು’ ಎಂದು ಹೇಳಿದರು.

ಅಧ್ಯಕ್ಷರ ಪತಿ ಗಲಿಬಿಲಿ: ಸಂಸದರು ನಗರಸಭೆಯ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾಗ ನಗರಸಭೆ ಅಧ್ಯಕ್ಷೆ ಶ್ವೇತಾ ಅವರ ಪತಿ ಶಬರೀಶ್‌ ಹಲವು ಬಾರಿ ಮಧ್ಯೆ ಮೂಗು ತೂರಿಸಿ ಮಾತನಾಡಿದರು. ಇದರಿಂದ ಕೆಂಡಾಮಂಡಲರಾದ ಸಂಸದರು, ‘ನೀವು ಯಾಕೆ ಮಾತನಾಡುತ್ತೀರಿ? ನಿಮ್ಮ ಪತ್ನಿ ಅಧ್ಯಕ್ಷರಲ್ಲವೇ? ಅವರೇ ಮಾಹಿತಿ ನೀಡಲಿ. ನೀವು ಸುಮ್ಮನೆ ಇರಿ’ ಎಂದು ಬೆವರಿಳಿಸಿದರು. ಇದರಿಂದ ಗಲಿಬಿಲಿಗೊಂಡ ಶಬರೀಶ್‌ ಮೌನಕ್ಕೆ ಶರಣಾದರು.

ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್‌ಗೌಡ, ಆಯುಕ್ತ ಪ್ರಸಾದ್‌ ಹಾಗೂ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.