ADVERTISEMENT

ಅಕ್ರಮ ಚಟುವಟಿಕೆ: ನಿಗಾ

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 10:55 IST
Last Updated 7 ಜುಲೈ 2013, 10:55 IST

ಗಂಗಾವತಿ: ವಿದೇಶಿಗರ ಸ್ವೇಚ್ಛೆಯ ತಾಣ ಎಂದೇ ಗುರುತಿಸಿಕೊಂಡಿರುವ ತಾಲ್ಲೂಕಿನ ವಿರುಪಾಪುರಗಡ್ಡೆಯಲ್ಲಿ ನಡೆಯುವ ಅನಧಿಕೃತ ಚಟುವಟಿಕೆ, ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಕಡಿವಾಣ ಹಾಕಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಮೊದಲ ಹಂತವಾಗಿ ಈಚೆಗೆ ಕೊಪ್ಪಳ ಜಿಲ್ಲಾಡಳಿತ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಕಾರ್ಯಾಚರಣೆಯಲ್ಲಿ ವಿರುಪಾಪುರ ಗಡ್ಡೆಯಲ್ಲಿದ್ದ ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ನೆಲಸಮ ಮಾಡಲಾಗಿತ್ತು.

ಇದೀಗ ಎರಡನೇ ಹಂತವಾಗಿ ಹಂಪಿ ಅಭಿವೃದ್ಧಿ ಪ್ರಾಧಿಕಾರವು ಹಂಪಿ ಮತ್ತು ವಿರುಪಾಪುರಗಡ್ಡೆಯಲ್ಲಿ ನಡೆಯುವ ಎಲ್ಲ ವಿದ್ಯಮಾನಗಳ ಮೇಲೆ ಹದ್ದಿನ ಕಣ್ಣಿಡಲು ದಿನದ 24 ಗಂಟೆಯೂ ಗಸ್ತು ಸಿಬ್ಬಂದಿಯನ್ನು ನಿಯೋಜಿಸಿದೆ.

ಪ್ರಕ್ರಿಯೆಯ ಮೊದಲ ಹಂತವಾಗಿ ವಿರುಪಾಪುರಗಡ್ಡೆಯಲ್ಲಿ ಗುರುವಾರದಿಂದ ಗೃಹರಕ್ಷಕ ದಳದ ಆರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆಯೂ ಗಸ್ತು ತಿರುಗುವಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೂಚಿಸಿದೆ.

ವಿದೇಶಿಯರ ಮೇಲೆ ಕಣ್ಣು: ಹಂಪೆ ಮತ್ತು ಐತಿಹಾಸಿಕ ಆನೆಗೊಂದಿ ಭಾಗಕ್ಕೆ ಪ್ರವಾಸ, ಅಧ್ಯಯನ ನೆಪದಲ್ಲಿ ಆಗಮಿಸುವ ನಾನಾ ದೇಶದ ವಿದೇಶಿಗರು, ಇಲ್ಲಿಗೆ ಬಂದ ಬಳಿಕ ಮೋಜು-ಮಸ್ತಿಯಲ್ಲಿ ಮೈಮರೆಯುತ್ತಾರೆ. ತುಂಡುಡುಗೆ ಮೂಲಕ ಸ್ಥಳೀಯರ ಭಾವನೆ, ಸಂಸ್ಕೃತಿಗೆ ಧಕ್ಕೆ ತರುತ್ತಾರೆ ಎಂಬ ಆರೋಪಗಳಿವೆ.

ಕಾನೂನು ಬಾಹಿರ ಚಟುವಟಕೆಗಳಾದ ಗಾಂಜಾ, ಅಫೀಮು, ಚರಸ್, ಕೋಕ್‌ನಂತ ಮಾದಕ ದ್ರವ್ಯಗಳ ಮಾರಾಟ, ಕಳ್ಳ ಸಾಗಾಣಿಕೆ ಮಾಡುತ್ತಾರೆ ಎಂಬ ಗುರುತರ ಆರೋಪಗಳು ವಿದೇಶಿ ಪ್ರವಾಸಿಗರ ಮೇಲಿದೆ. ಈ ಹಿನ್ನೆಲೆ ಪ್ರಾಧಿಕಾರ ವಿದೇಶಿಗರ ಮೇಲೆ ಕಣ್ಣಿಡಲು ಸೂಚಿಸಿದೆ.

ಅತಿಕ್ರಮಣ ತಡೆ: ಇದರ ಜೊತೆಗೆ ವಿರುಪಾಪುರಗಡ್ಡೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ, ಅಕ್ರಮವಾಗಿ ವಾಣಿಜ್ಯ ಚಟುವಟಿಕೆ, ಗುಡಿ, ಗೋಪುರ ನಾಶ ಮತ್ತಿತರ ಘಟನೆಗಳ ತಡೆಗೆ ಪ್ರಾಧಿಕಾರ ಯೋಜನೆ ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.