ADVERTISEMENT

ಅತಿಕ್ರಮಣ: ಸ್ವಪ್ರೇರಣೆ ತೆರವಿಗೆ ಶಾಸಕ ಮನವಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 8:42 IST
Last Updated 22 ಡಿಸೆಂಬರ್ 2012, 8:42 IST

ಕಾರಟಗಿ: ಮೆಟಲಿಂಗ್ ಹಾಗೂ ಡಾಂಬರೀಕರಣದ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಅಕ್ಕ, ಪಕ್ಕದ ಜನರು ಕಟ್ಟೆ ಸೇರಿದಂತೆ ಮತ್ತಿತರ ಅತಿಕ್ರಣವನ್ನು ಸ್ವಪ್ರೇರಣೆಯಿಂದ ತೆರವುಗೊಳಿಸಿ ಸಹಕರಿಸಿದರೆ ಸುಸಜ್ಜಿತ ರಸ್ತೆ ನಿಮಾಣ ಮಾಡಲು ಸಾಧ್ಯವಾಗುವುದು ಎಂದು ಶಾಸಕ ಶಿವರಾಜ್ ತಂಗಡಗಿ ಹೇಳಿದರು.

ಕಾರಟಗಿಯ ಆರ್.ಜಿ. ರಸ್ತೆಯಿಂದ ಬಸವಣ್ಣಕ್ಯಾಂಪ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ವಿಶೇಷ ಅನುದಾನದಡಿ ರಸ್ತೆಗಳ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.

ಆರ್.ಜಿ. ರಸ್ತೆಯಿಂದ 3 ಕಿಮೀವರೆಗೆ ಮೆಟಲಿಂಗ್ ಹಾಗೂ ಡಾಂಬರೀಕರಣ, ನಂತರದ 2ಕಿ. ಮೀ ಈಗಿರುವ ರಸ್ತೆಯ ಮೇಲೆ ಇನ್ನೊಂದು ಸುತ್ತು ಡಾಂಬರೀಕರಣ ಮಾಡಲಾಗುವುದು. ಒಟ್ಟು 5ಕಿಮೀ ರಸ್ತೆಯ ನಿರ್ಮಾಣ 50 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗುವುದು. ಪನ್ನಾಪೂರದಿಂದ ಬೇವಿನಾಳವರೆಗಿನ ಒಂದೂವರೆ ಕಿ. ಮೀ ರಸ್ತೆಯ ಮೆಟಲಿಂಗ್ ಹಾಗೂ ಡಾಂಬರೀಕರಣ ಕಾರ್ಯವು 40 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿದೆ ಎಂದವರು ವಿವರಿಸಿದರು.

ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಇಲ್ಲ. ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆಯ ಬಗ್ಗೆ ನಾಳೆಯೆ ಭೇಟಿ ನೀಡಿ ಪರಿಶೀಲಿಸುವೆ. ಅಸಭ್ಯತನದಿಂದ ವರ್ತಿಸಿದ ಸಿಬ್ಬಂದಿಯ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಜಿಪಂ ಸದಸ್ಯರಾದ ಅಮರೇಶ ಕುಳಗಿ, ಜ್ಯೋತಿ ನಾಗರಾಜ್ ಬಿಲ್ಗಾರ್, ತಾಪಂ ಸದಸ್ಯ ಹಿರೇಬಸಪ್ಪ ಸಜ್ಜನ್, ಗ್ರಾಪಂ ಅಧ್ಯಕ್ಷ ಬಿ. ಶರಣಯ್ಯಸ್ವಾಮಿ, ಗ್ರಾಪಂ ಸದಸ್ಯರಾದ ಹನುಮಂತಸಿಂಗ್, ದೊಡ್ಡಪ್ಪ ಮೇಳಿ, ಪ್ರಮುಖರಾದ ಸಿದ್ದಯ್ಯಸ್ವಾಮಿ, ಹನುಮಂತಪ್ಪ ಪನ್ನಾಪೂರ, ಶರಣೇಗೌಡ ಬೇವಿನಾಳ, ಈಶಪ್ಪ ಇಟ್ಟಂಗಿ, ನಂದಿಹಳ್ಳಿ ರುದ್ರಗೌಡ, ಬಸವ ಬೇವಿನಾಳ, ಬಾಪೂಗೌಡ, ಜಿಪಂ ಎಂಜಿನೀಯರ್ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.