ಮುನಿರಾಬಾದ್: ಜಿಲ್ಲೆ ವ್ಯಾಪ್ತಿಯಲ್ಲಿ ಎಲ್ಲಾ ಅಂಗಡಿ, ವಾಣಿಜ್ಯ ಮಳಿಗೆ ಮತ್ತು ಉದ್ಯಮ ಸಂಸ್ಥೆಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ವೀರಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರಿಗೆ ಈಚೆಗೆ ಮನವಿಪತ್ರ ಸಲ್ಲಿಸಿದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ್ನಾಯಕ್ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಕಾರ್ಯಕರ್ತರು, ‘ನವೆಂಬರ್ ತಿಂಗಳು ಸಮೀಪಿಸುತ್ತಿದ್ದು ಕನ್ನಡ ರಾಜ್ಯೋತ್ಸವ ಆಚರಿಸಲು ತಯಾರಿ ನಡೆದಿದೆ. ಆದರೆ, ದಿನಾಚರಣೆ ಆಚರಿಸಿದರೆ ಸಾಲದು ಬದಲಿಗೆ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ನಾಮಫಲಕದಲ್ಲಿ ಕನ್ನಡ ಭಾಷೆ ಪ್ರಧಾನವಾಗಿರಬೇಕು ಮತ್ತು ಶೇ 70ಕ್ಕಿಂತ ಅಧಿಕ ಭಾಗ ಕನ್ನಡ ಭಾಷೆಯಲ್ಲಿರಬೇಕು ಎಂಬ ನಿಯಮವಿದೆ. ಕೆಲವು ವಾಣಿಜ್ಯ ಸಂಸ್ಥೆಗಳಲ್ಲಿ ಅನ್ಯಭಾಷೆ ನಾಮಫಲಕ ಅಳವಡಿಸಲಾಗಿದೆ. ತಕ್ಷಣ ಕ್ರಮ ಕೈಗೊಂಡು ಕನ್ನಡ ಭಾಷೆಯ ಫಲಕ ಅಳವಡಿಸುವಂತೆ ಸೂಚಿಸಬೇಕು’ ಎಂದು ಆಗ್ರಹಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷ ಹೊಸಹಳ್ಳಿ, ಪದಾಧಿಕಾರಿಗಳಾದ ಕುಮಾರ್ಪತ್ತಾರ, ಪದ್ಮಕ್ಕ ಗಂಗಾವತಿ, ದೇವಮ್ಮ, ಯಂಕಪ್ಪಹೊಸಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.