ಹನುಮಸಾಗರ: ಕಳೆದ ಮೂರು ವರ್ಷಗಳಿಂದ ಬಸವಳಿದು ನಿಂತಿದ್ದ ಕಬ್ಬರಗಿ ಸಮೀಪದ ಕಪ್ಪಲೆಪ್ಪ ಜಲಪಾತಕ್ಕೆ ಈಚೆಗೆ ಬಿದ್ದ ಸ್ವಲ್ಪ ಪ್ರಮಾಣದ ಮಳೆಗೆ ನಾಲ್ಕು ದಿನ ಕೊಂಚ ಜೋರಾಗಿಯೇ ನೀರು ಸುರಿದರೆ ಈಗ ಜಲಪಾತದ ನೀರು ದಾರದ ಆಕಾರಕ್ಕೆ ಬಂದಿದೆ.
ಆದರೆ ಸುತ್ತಮುತ್ತಲಿನ ಪ್ರವಾಸಿಗರು ಮಾತ್ರ ಇಲ್ಲಿಗೆ ತಂಡೋಪತಂಡವಾಗಿ ಬಂದು ದಾರದ ಆಕಾರದಲ್ಲಿ ಬೀಳುತ್ತಿರುವ ಈ ನೀರಿಗೆ ಮೈಯೊಡ್ಡುವಲ್ಲಿ ಪೈಪೋಟಿ ನಡೆಸುತ್ತಿರುವುದು ಕಂಡು ಬರುತ್ತಿದೆ.
ನಮಗೆ ಆಸರಕಿ, ಬ್ಯಾಸರಕಿ ಕಳೆದುಕೊಳ್ಳೋಕೆ ನಮ್ಮ ಸುತ್ತಮುತ್ತ ಇರುವುದು ಇದೊಂದೆ ಜಲಪಾತ, ಅದು ದಾರದ್ಹಾಂಗರ ಬೀಳಲಿ ಹನಿ ಹನಿಯಾಗಿಯಾದ್ರೂ ಬೀಳಲಿ ಅದೇ ನಮಗ ಹಿತ ಎಂದು ಹನುಮಸಾಗರದ ಯುವಕ ಪ್ರವೀಣ ಪಾಟೀಲ ಹೇಳುತ್ತಾರೆ.
ಕಪ್ಪಲೆಪ್ಪ, ಕಪೀಲತೀರ್ಥ, ಕಬ್ಬರಗಿದಿಡಗ ಎಂದೆಲ್ಲ ಕರೆಸಿಕೊಳ್ಳುವ ಈ ಜಲಪಾತ ಬರುಡು ನೆಲದ್ಲ್ಲಲೊಂದು ಚಿಲುಮೆಯಾಗಿದೆ. ಮಳೆಗಾಲದಲ್ಲಿ ಜೀವಕಳೆ ತುಂಬಿಕೊಂಡಿದ್ದರೆ ಉಳಿದ ದಿನಗಳಲ್ಲಿ ಬರುಡಾಗಿ ನಿಂತಿರುತ್ತದೆ. ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ತಮ್ಮ ದಣಿವು ಕಳೆದುಕೊಳ್ಳುವುದಕ್ಕಾಗಿ ವರ್ಷದಲ್ಲಿ ಒಂದು ದಿನ ಈ ಜಲಪಾತಕ್ಕೆ ಬಂದು ಮೈ-ಮನ ಹಗುರ ಮಾಡಿಕೊಂಡು ಹೋಗುತ್ತಾರೆ. ಆದರೆ ಇತ್ತೀಚೆಗೆ ಸರಿಯಾಗಿ ಮಳೆಯೇ ಆಗುತ್ತಿಲ್ಲದ ಕಾರಣವಾಗಿ ಜಲಪಾತಕ್ಕೆ ನೀರೇ ಬರುತ್ತಿಲ್ಲ. ಇದು ಕಪ್ಪಲೆಪ್ಪ ಪ್ರಿಯರಿಗೆ ನೋವು ತಂದಿದೆ.
ಕಡಿಮೆ ಪ್ರಮಾಣದಲ್ಲಿ ನೀರು ಬೀಳುತ್ತಿದ್ದರೂ ಜಲಪಾತಕ್ಕೆ ಬಂದು ನೀರಿಗೆ ಮೈಯೊಡ್ಡಿ ದಣಿವು ಕಳೆದುಕೊಳ್ಳುವಲ್ಲಿ ಪ್ರವಾಸಿಗರು ಪೈಪೋಟಿ ನಡೆಸುತ್ತಿರುವುದು ಇಲ್ಲಿ ಕಂಡು ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.