ADVERTISEMENT

ಕೆಲ ವಸತಿನಿಲಯಗಳ ಸ್ಥಿತಿ ಶೋಚನೀಯ!

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 7:13 IST
Last Updated 6 ಏಪ್ರಿಲ್ 2013, 7:13 IST

ಯಲಬುರ್ಗಾ: ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಸತಿ, ಪೌಷ್ಠಿಕ ಆಹಾರದ ಜೊತೆಗೆ ಒಳ್ಳೆಯ ಪರಿಸರ ಸೃಷ್ಟಿಸುವಲ್ಲಿ ವಿಫಲವಾಗಿರುವ ರಾಜ್ಯದ ವಸತಿನಿಲಯಗಳ ವಾಸ್ತವತೆ   ನಿಜಕ್ಕು ಶೋಚನೀಯ. ಪುಸಕ್ತದ ಮೂಲಕ ಸರ್ಕಾರದ ಗಮನಕ್ಕೆ ತರುತ್ತಿರುವ ಪರಿಷತ್ತಿನ ಕೆಲಸ ಶ್ಲಾಘನೀಯ ಎಂದು ಪ್ರಾಚಾರ್ಯ ರವಿ ನಿಂಗೋಜಿ ಹೇಳಿದರು.

ಸ್ಥಳೀಯ ಎಸ್.ಎ. ನಿಂಗೋಜಿ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಕಟಿಸಿದ ಪುಸ್ತಕ ಬಿಡುಗಡೆಗೊಳಿಸಿ  ಮಾತನಾಡಿದ ಅವರು, ವಿದ್ಯಾರ್ಥಿಗಳಿಗಾಗಿಯೇ ಇರುವ ಈ ಹಾಸ್ಟೆಲ್‌ಗಳು ಅವರ ಹಿತವನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಮಕ್ಕಳ ಹಿತದೃಷ್ಟಿಯಿಂದ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಪ್ರಯತ್ನ ಎಂದರು.

ಸಂಘಟನಾ ಕಾರ್ಯದರ್ಶಿ ರಾಕೇಶ ಪಾನಘಂಟಿ ಮಾತನಾಡಿ, ತಮ್ಮಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಸಮಾಜ ಸುಧಾರಣೆಗೆ ಯುವಕರು ವಿಶೇಷ ಕೊಡುಗೆ ನೀಡಬೇಕಾಗಿದೆ. ಆದರೆ ದುಶ್ಚಟ ಹಾಗೂ ನಿರುತ್ಸಾಹದ ಕಡೆ ವಾಲಿ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಸುತ್ತಿರುವುದು ಆತಂಕದ ಸಂಗತಿ. ದೇಶದ ಸಮಗ್ರತೆಗೆ ಮಾರಕವಾಗುವ ಕಾರ್ಯಗಳಿಗೆ  ವಿರುದ್ಧವಾಗಿ ಹೋರಾಡುವ ಎಬಿವಿಪಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಸಂಘಟನೆಯ ಪ್ರಕಾಶ ದೇಸಾಯಿ ಮಾತನಾಡಿ, ವಿದ್ಯಾಭಾರತಿ ಸಂಸ್ಥೆಯ ಅಡಿಯಲ್ಲಿ ವಿವಿಧೆಡೆ ಸಾಕಷ್ಟು ಶಿಕ್ಷಣ ಕೇಂದ್ರಗಳು ವಿಶೇಷ ತರಗತಿಗಳ ಮೂಲಕ ಮಕ್ಕಳಲ್ಲಿ ವೈಚಾರಿಕ ಮನೋಭಾವ ಹಾಗೂ ಕ್ರಿಯಾತ್ಮಕ ಶಿಕ್ಷಣವನ್ನು ನೀಡಲಾಗುತ್ತಿದೆ, ಇಂತಹ ಕೇಂದ್ರಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತೆರೆದು ಶೈಕ್ಷಣಿಕ ಕ್ರಾಂತಿ ಮಾಡಬೇಕಾಗಿದೆ ಎಂದು ನುಡಿದರು. ತಾಲ್ಲೂಕು ಸಂಚಾಲಕ ಮಂಜುನಾಥ ಮಾಲಗಿತ್ತಿ, ಅಧ್ಯಕ್ಷತೆ ವಹಿಸಿದ್ದ ವಸಂತ ಭಾವಿಮನಿ, ಮುಖಂಡ ಹನಮಂತ ಜೂಲಕಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.