ADVERTISEMENT

ಗುಣಮಟ್ಟವೋ, ದಾಖಲಾತಿಯೋ?

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:33 IST
Last Updated 12 ಜುಲೈ 2017, 6:33 IST
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿದ್ಯಾವಿಷಯಕ ಪರಿಷತ್‌ ಸಭೆಯಲ್ಲಿ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ಮಾತನಾಡಿದರು. ಕುಲಸಚಿವ ಪ್ರೊ.ಟಿ.ಎಂ.ಭಾಸ್ಕರ್‌, ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗದ ಸುನೀಲ್‌ಕುಮಾರ್, ಕಲಾ ನಿಕಾಯದ ಡೀನ್‌ ಪ್ರೊ.ರಾಬರ್ಟ್‌ ಜೋಸೆಫ್‌ ಮತ್ತು ಪರಿಷತ್‌ ಸದಸ್ಯ ವೆಂಕಟೇಶ್‌ ಡ್ಯಾಗಿ ಇದ್ದಾರೆ
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿದ್ಯಾವಿಷಯಕ ಪರಿಷತ್‌ ಸಭೆಯಲ್ಲಿ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ಮಾತನಾಡಿದರು. ಕುಲಸಚಿವ ಪ್ರೊ.ಟಿ.ಎಂ.ಭಾಸ್ಕರ್‌, ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗದ ಸುನೀಲ್‌ಕುಮಾರ್, ಕಲಾ ನಿಕಾಯದ ಡೀನ್‌ ಪ್ರೊ.ರಾಬರ್ಟ್‌ ಜೋಸೆಫ್‌ ಮತ್ತು ಪರಿಷತ್‌ ಸದಸ್ಯ ವೆಂಕಟೇಶ್‌ ಡ್ಯಾಗಿ ಇದ್ದಾರೆ   

ಬಳ್ಳಾರಿ: ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದು ಮುಖ್ಯವೋ ಅಥವಾ ಗುಣಮಟ್ಟದ ಕೊರತೆ ಇದ್ದರೂ ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣವನ್ನು ಹೆಚ್ಚಿ ಸುವುದು ಮುಖ್ಯವೋ ಎಂಬ ಕುರಿತು ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾವಿಷಯಕ ಪರಿಷತ್‌ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು.

ಪದವಿ ಹಂತದಲ್ಲಿ ಸಾರ್ವಜನಿಕ ಆಡಳಿತ ಅಧ್ಯಯನವನ್ನು ಕಡ್ಡಾಯಗೊಳಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆಯ ಪ್ರಸ್ತಾವನೆ ಉಲ್ಲೇಖವಾದಾಗ ಈ ಚರ್ಚೆ ಆರಂಭವಾಯಿತು.

‘ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಹಲವು ಕಾಲೇಜುಗಳಲ್ಲಿ ಅಗತ್ಯ ಸಂಖ್ಯೆಯ ಬೋಧಕರಿಲ್ಲ. ಮೂಲಸೌಕರ್ಯಗಳಿಲ್ಲ. ವಿಜ್ಞಾನ ಪ್ರಯೋಗಾಲಯಗಳಿಲ್ಲ. ಇಂಥ ಸಂದರ್ಭದಲ್ಲಿ ಹೊಸ ವಿಷಯಗಳನ್ನು ಕಡ್ಡಾಯಗೊಳಿಸುವುದು ಸರಿಯಲ್ಲ. ಗುಣಮಟ್ಟದ ಶಿಕ್ಷಣ ನೀಡದ ಕಾಲೇಜುಗಳನ್ನು ಮುಚ್ಚಿದರೆ ಇನ್ನೂ ಒಳ್ಳೆಯದು’ ಎಂದು ಪರಿಷತ್‌ ಸದಸ್ಯ ಕೆ.ಎಚ್‌.ಶಿವಪ್ರಸಾದ್‌ ಅಭಿಪ್ರಾಯಪಟ್ಟರು.

ADVERTISEMENT

‘ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿವೇತನದ ಪಾಲನ್ನೇ ನೆಚ್ಚಿಕೊಂಡು ಹಲವು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಹಲವೆಡೆ ವಿದ್ಯಾರ್ಥಿಗಳು ತರಗತಿಗಳಿಗೆ ಬರುವುದೇ ಇಲ್ಲ. ಬನ್ನಿ ಎಂದು ಕಾಲೇಜುಗಳು ಕರೆಯುವುದೂ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ದಾಖಲಾತಿ ಅಗತ್ಯ: ಅವರ ಮಾತನ್ನೂ ಒಪ್ಪಿದರಾದರೂ, ತಮ್ಮ ಆತಂಕ ವ್ಯಕ್ತಪಡಿಸಿದ ಕುಲಪತಿ ಪ್ರೊ.ಎಂ.ಎಸ್‌. ಸುಭಾಷ್‌, ‘ಗುಣಮಟ್ಟ ಮತ್ತು ಮೂಲಸೌಕರ್ಯದ ಕೊರತೆಯ ಹೆಸರಿನಲ್ಲಿ ಕಾಲೇಜುಗಳನ್ನು ಮುಚ್ಚಿಬಿಟ್ಟರೆ ಬಳ್ಳಾರಿಯಂಥ ಹಿಂದುಳಿದ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾಗುವವರ ಸಂಖ್ಯೆ ಇನ್ನಷ್ಟು ಕುಸಿಯುತ್ತದೆ’ ಎಂದರು.

‘ಕಾಲೇಜುಗಳು ಸರಿ ಇಲ್ಲ. ಹೀಗಾಗಿ ಹೊಸ ಕಾಲೇಜುಗಳನ್ನು ಆರಂಭಿ ಸಬಾರದು ಎಂಬ ವಾದವೂ ಸರಿಯಲ್ಲ. ಕಾಲೇಜುಗಳಲ್ಲಿ ಗುಣಮಟ್ಟ ಹೆಚ್ಚಿಸ ಬೇಕಾದ ಕಾಲೇಜು ಅಭಿವೃದ್ಧಿ ಸಮಿತಿಗಳು ಏನು ಮಾಡುತ್ತಿವೆ’ ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.

‘ಪ್ರತಿ ಕಾಲೇಜಿನ ವಸ್ತುಸ್ಥಿತಿ ಕುರಿತು ಸಮಿತಿಗಳಿಂದ ಅಧ್ಯಯನ ವರದಿ ತರಿಸಿಕೊಂಡು, ಅಗತ್ಯಕ್ಕೆ ಅನುಗುಣವಾಗಿ ಅನುದಾನ ಕೋರಿ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮನವಿ ಸಲ್ಲಿಸಬೇಕು. ಅನುದಾನ ದೊರೆತರೆ ಕಾಲೇಜುಗಳ ಗುಣಮಟ್ಟವನ್ನು ಹೆಚ್ಚಿಸುವುದು ಕಷ್ಟವೇನಲ್ಲ’ ಎಂದು ಅಭಿಪ್ರಾಯಪಟ್ಟರು.

ಸಂಚಾಲಕರ ನೇಮಕ: ಪೂರ್ಣಾವಧಿ ಸಿಬ್ಬಂದಿ ಇಲ್ಲದ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರನ್ನೇ ಪೂರ್ಣಾವಧಿ ಸಂಚಾಲಕರನ್ನಾಗಿ ನೇಮಿಸಬೇಕು. ಆಯಾ ವಿಭಾಗಕ್ಕೆ ಸಂಬಂಧಿಸಿದವರನ್ನೇ ನೇಮಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಪ್ರೊ.ಕೆ.ವಿ.ಪ್ರಸಾದ್ ಮತ್ತು ಶಿವಪ್ರಸಾದ್‌ ಆಗ್ರಹಿಸಿದರು. ಆಡಿಟ್‌ ಅಭಿಪ್ರಾಯಕ್ಕೆ ಒಳಪಟ್ಟು ಕೂಡಲೇ ನೇಮಕಾತಿ ಆದೇಶ ನೀಡುವುದಾಗಿ ಕುಲಸಚಿವ ಪ್ರೊ.ಟಿ.ಎಂ.ಭಾಸ್ಕರ್‌ ಹೇಳಿದರು.

ಗಂಗಾವತಿ: ಸ್ನಾತಕೋತ್ತರ ಕೋರ್ಸ್
ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್‌ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ, ಶಿಕ್ಷಣ, ಸಮಾಜಶಾಸ್ತ್ರ ಮತ್ತು ಸಮೂಹ ಮಾಧ್ಯಮ ವಿಷಯಗಳ ಸ್ನಾತಕೋತ್ತರ ಕೋರ್ಸ್‌ ಆರಂಭಿಸಲು ಪರಿಷತ್‌ ಅನುಮೋದಿಸಿತು. ಅಲ್ಲಿಯೇ ಭೌತಶಾಸ್ತ್ರ ಸ್ನಾತಕೋತ್ತರ ಆರಂಭಿಸಲು ಅನುಮತಿ ನೀಡುವ ಮುನ್ನ ಸಮಿತಿ ಭೇಟಿ ನೀಡಿ ವರದಿ ಸಲ್ಲಿಸಲಿ ಎಂದು ಕುಲಪತಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.