ಯಲಬುರ್ಗಾ: ದಿನಗೂಲಿ ನೌಕರರ ಸೇವೆಯನ್ನು ಖಾಯಂಗೊಳಿಸುವುದು, ವಿವಿಧ ಲಭ್ಯಗಳನ್ನು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಅಖಿಲ ಭಾರತೀಯ ಗ್ರಾಮೀಣ ಅಂಚೆ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ.
ಕೆಲಸಕ್ಕೆ ಗೈರುಹಾಜರಾಗಿ ಮುಷ್ಕರ ನಡೆಸುತ್ತಿರುವ ಗ್ರಾಮೀಣ ಅಂಚೆ ನೌಕರರು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹಾಗೂ ಜೆಸ್ಟಿಸ್ ತಳವಾರ ಸಮಿತಿ ವರದಿ ಅನ್ವಯ 6ಗಂಟೆಗೂ ಅಧಿಕ ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನು ಖಾಯಂ ಗೊಳಿಸಬೇಕು.
ಇಲಾಖೆ ನೌಕರರಿಗೆ ಕೊಡುವ ಕೆಲ ಬೋನಸ್ಸ ಅನ್ನ ಗ್ರಾಮೀಣ ಅಂಚೆ ನೌಕರರಿಗೂ ಕೊಡುವುದು, ಅನುಕಂಪ ಆಧಾರದ ಮೇಲ ತೆಗೆದುಕೊಳ್ಳುವ ನೌಕರರಿಗೆ ಈಗಿರು ಪದ್ದತಿಯನ್ನು ಕೈಬಿಟ್ಟು ಹಿಂದಿನ ಪದ್ದತಿಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.
ಅಂಚೆ ಪೇದೆ, ಮೇಲ್ ಗಾರ್ಡ್ ಮತ್ತು ಎಂಟಿಎಸ್ ಕೆಲಸಕ್ಕೆ ಗ್ರಾಮೀಣ ಅಂಚೆ ನೌಕರರನ್ನು ಸೇವಾ ಜೇಷ್ಠತೆ ಆಧಾರದ ಮೇಲೆ ನೇಮಿಸಿಕೊಳ್ಳುವುದು, ಹೊಸ ನೇಮಕಾತಿ ಪದ್ದತಿಯಲ್ಲಿರುವ ದೋಷಗಳನ್ನು ನಿವಾರಿಸಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು, ಬಾಕಿ ವೇತನ ಮಂಜೂರು ಮಾಡುವುದು ಹಾಗೂ ವೇತನ ಕಡಿತಗೊಳಿಸುವುದನ್ನು ನಿಲ್ಲಿಸುವುದು, ರಾಷ್ಟ್ರೀಯ ಸ್ವಾಸ್ಥ್ಯ ಭೀಮ ಯೋಜನೆಯನ್ನು ಶೀಘ್ರದಲ್ಲಿ ಜಾರಿಗೆ ತರುವುದು, 2006ರಿಂದ ಅನ್ವಯ ವಾಗುವಂತೆ ಅಂಚೆ ಇಲಾಖೆಯಲ್ಲಿ ದಿನಗೂಲಿ ನೌಕರರಿಗೆ ಪರಿಷ್ಕೃತ ವೇತನ ಮತ್ತು ಇತರೆ ಸೌಲಭ್ಯಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಷ್ಕರ ನೇತೃತ್ವವನ್ನು ಪ್ರಕಾಶ ಗದಗ ವಹಿಸಿದ್ದರು. ಮಲ್ಲನಗೌಡ ಹೊಸ್ಮನಿ, ಬಸಪ್ಪ, ಶರಣಪ್ಪ, ತಿಪ್ಪಣ್ಣ ಸೋಮಣ್ಣ ಸೊಂಪೂರ, ನೀಲಕಂಡಪ್ಪ, ಗಣೇಶರಾವ್, ಮಲ್ಲಿಕಾರ್ಜುನ ಕೆ, ಮರ್ತುಜಸಾಬ, ಗೋಸಪ್ಪ, ಇಮಾಮಹುಸೇನ ಮಹಾಂತೇಶ, ಗದ್ದೇಪ್ಪ, ಸಂತೋಷ ಜೆ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.