
ಹನುಮಸಾಗರ: ಸಮೀಪದ ಮೀಯಾಪುರ ಗ್ರಾಮದ ಗುರುಸಿದ್ದಪ್ಪ ಹನುಮಪ್ಪ ಶಿರೂರ ಅವರ ತೋಟಕ್ಕೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ದಾಳಿಂಬೆ ಗಿಡ, ತೆಂಗಿನ ಮರಗಳು ಬೆಂಕಿಗೆ ಆಹುತಿಯಾದವು.
ತೋಟದ ಬದುವಿನಲ್ಲಿ ಕಾಣಿಸಿಕೊಂಡು ಬೆಂಕಿ ಗಾಳಿ ಬೀಸಿದ್ದರಿಂದ ಎಲ್ಲೆಡೆ ಹಬ್ಬಿದ್ದರಿಂದ ಸುಮಾರು 3 ಎಕರೆ 10 ಗುಂಟೆ ಜಮೀನಿನಲ್ಲಿ ದಾಳಿಂಬೆ, ಪಪ್ಪಾಯಿ, ಕಿನೋ, ಹೆಬ್ಬೇವು, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳು ಸುಟ್ಟು ಹೋಗಿವೆ.
ದಾಳಿಂಬೆ ಬೆಳೆ ಹೂವು, ಹೂಚುಗಳಿಂದ ತುಂಬಿತ್ತು, ಲಕ್ಷಾಂತರ ರೂಪಾಯಿ ಸಾಲ ಮಾಡಿದ ಬೆಳೆ ಬೆಂಕಿಗೆ ಆಹುತಿಯಾಗಿದೆ ಎಂದು ರೈತ ಹನುಮಪ್ಪ ನೋವು ತೋಡಿಕೊಂಡರು.
ಬೆಂಕಿಗೆ 60 ರಿಂದ 70 ತೆಂಗಿನಗಿಡಗಳು, ಸುಮಾರು ರೂ 1.5 ಲಕ್ಷ ವೆಚ್ಚದಲ್ಲಿ ಹಾಕಿದ್ದ ತಂತಿ ಬೇಲಿ ಹಾನಿಗೀಡಾಗಿದೆ.
ರಸ್ತೆ ಸರಿಯಾಗಿಲ್ಲದ ಕಾರಣ ಅಗ್ನಿಶಾಮಕ ದಳದವರು ಬರಲು ತಡವಾಯಿತು. ಗ್ರಾಮಸ್ಥರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತೋಟದ ಮಾಲಿಕ ಗುರುಸಿದ್ದಪ್ಪ ಶಿರೂರ ತಿಳಿಸಿದರು. ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ವೀರೇಶ ಎತ್ತಿನಮನಿ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.