ಯಲಬುರ್ಗಾ: ಸ್ಥಳೀಯ ವಿಜಯ ದುರ್ಗಾದೇವಿ ದೇವಸ್ಥಾನದಲ್ಲಿ ಕಳೆದ ಎರಡು ವಾರಗಳಿಂದ ಹಮ್ಮಿಕೊಂಡಿದ್ದ ದೇವಿ ಪುರಾಣ ಮಹಾಮಂಗಲೋತ್ಸವ ಶುಕ್ರವಾರ ನಡೆಯಿತು. ಪ್ರತಿದಿನ ರಾತ್ರಿ ಪುರಾಣ ಪಠಣ, ಪ್ರವಚನ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದವು, ವಿವಿಧ ಹೂಗಳಿಂದ ಅಲಂಕರಿಸಿದ್ದ ದೇವಸ್ಥಾನದ ಆವರಣದಿಂದ ಬೆಳಿಗ್ಗೆ ಆರಂಭವಾದ ದೇವಿ ಮೂರ್ತಿಯುಳ್ಳ ಅಂಬಾರಿ ಮೆರವಣಿಗೆ ಎಲ್ಲರನ್ನು ಆಕರ್ಷಿಸಿತು.
ವಿವಿಧ ವಾದ್ಯಮೇಳದೊಂದಿಗೆ ಪಟ್ಟಣದ ವಿವಿಧ ಬೀದಿಗಳಲ್ಲಿ ನಡೆದ ಈ ಮೆರವಣಿಗೆಯಲ್ಲಿ ಸಾಕಷ್ಟು ಸಂಖ್ಯೆಯ ಭಕ್ತರು, ಮಹಿಳೆಯರು ಕುಂಭ ಹಾಗೂ ಆರತಿ ತಟ್ಟೆಗಳೊಂದಿಗೆ ಪಾಲ್ಗೊಂಡಿದ್ದರು. ಸುತ್ತಮುತ್ತಲಿನ ವಿವಿಧ ಗ್ರಾಮದ ಜನರು ಪಾಲ್ಗೊಂಡಿದ್ದರಿಂದ ಕಳೆದ ವರ್ಷಕ್ಕಿಂತಲೂ ಜನದಟ್ಟಣೆ ಹೆಚ್ಚಿತ್ತು. ಸುರಿಯುತ್ತಿದ್ದ ತುಂತುರು ಮಳೆಯನ್ನು ಲೆಕ್ಕಿಸದೇ ಮೆರವಣಿಗೆಯಲ್ಲಿ ಭಾಗವಹಿಸಿದರು.
ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಪಟ್ಟಣದಲ್ಲಿ ವೈವಿಧ್ಯಮಯ ರೀತಿಯಲ್ಲಿ ನಡೆಯುವ ಸಾಂಸ್ಕೃತಿಕ ಪರಂಪರೆಯಲ್ಲಿ ವಿಜಯ ದುರ್ಗಾದೇವಿಯ ದೇವಸ್ಥಾನ ಸಮಿತಿಯವರು ಹಮ್ಮಿಕೊಳ್ಳುವ ದಸರಾ ಆಚರಣೆ ಮಾದರಿಯಾಗಿದೆ ಎಂದರು. ಗಣ್ಯರಾದ ಬಸವರಾಜ ಉಳ್ಳಾಗಡ್ಡಿ, ಬಸಪ್ಪ ಕಮ್ಮಾರ, ಸಂಗಪ್ಪ ಕೊಪ್ಪಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.