ADVERTISEMENT

ದೊಟಿಹಾಳ ಗ್ರಾಪಂ; ರೂ 40 ಲಕ್ಷ ಖಾತರಿ ಅವ್ಯವಹಾರ:ಶಿಸ್ತು ಕ್ರಮಕ್ಕೆ ಜಿ.ಪಂ ಸಿಇಒ ತಾಕೀತು

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 6:10 IST
Last Updated 7 ಜುಲೈ 2012, 6:10 IST

ಕುಷ್ಟಗಿ:  ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ತಾಲ್ಲೂಕಿನ ದೋಟಿಹಾಳ ಗ್ರಾಮ ಪಂಚಾಯಿತಿಯಲ್ಲಿ 2010-11ನೇ ಹಣಕಾಸು ವರ್ಷದಲ್ಲಿ ನಡೆದಿದೆ ಎನ್ನಲಾದ ರೂ 40 ಲಕ್ಷ ಮೊತ್ತದ ಅವ್ಯಹಾರಕ್ಕೆ ಸಂಬಂಧಿಸಿದಂತೆ ಅಕ್ರಮದಲ್ಲಿ ಭಾಗಿಯಾದವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ತಾಕೀತು ಮಾಡಿದ್ದಾರೆ.

ಈ ಕುರಿತು ಇಲ್ಲಿಯ ತಾ.ಪಂ ಕಾರ್ಯನಿವಾರ್ಹಕ ಅಧಿಕಾರಿಗೆ ಸೂಚನೆ ನೀಡಿರುವ ಅವರು, ಅವ್ಯವಹಾರದ ತನಿಖೆಗೆ ಆದೇಶಿಸಿ ನಂತರ ಶಿಸ್ತುಕ್ರಮ ಕೈಗೊಳ್ಳುವಂತೆ ತನಿಖೆ ನಡೆಸಿದ ಯೋಜನೆ ಸಹಾಯಕ ನಿರ್ದೇಶಕರಿಂದ ವರದಿ ಬಂದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ಸಮಂಜಸವಲ್ಲ ಎಂದು ಪತ್ರದಲ್ಲಿ ಆಕ್ಷೇಪಿಸಿದ್ದಾರೆ. ಅಲ್ಲದೇ ನಿಯಮಾನುಸಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಕೆಲಸವಿಲ್ಲದೇ ನಕಲಿ ದಾಖಲೆಗಳನ್ನು ನೀಡಿ ಯೋಜನೆಯ ಲಕ್ಷಾಂತರ ಹಣ ದುರ್ಬಳಕೆ ಮಾಡಿಕೊಂಡಿರುವುದು ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದು ವರದಿ ನೀಡಿದರೂ ಕ್ರಮ ಕೈಗೊಳ್ಳದಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ಥಳೀಯ ಘಟಕದ ಶುಕಮುನಿ ಈಳಿಗೇರ, ಚೇತನಕುಮಾರ ಹಿರೇಮಠ ಮತ್ತಿತರರು ಜಿಲ್ಲಾ ಪಂಚಾಯಿತಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿ.ಪಂ ಸಿಇಒ ಇಲ್ಲಿಯ ತಾ.ಪಂ ಅಧಿಕಾರಿಗೆ ಪತ್ರ ಬರೆದಿದ್ದಾರೆ.

ವರದಿ: ಸದರಿ ಗ್ರಾ.ಪಂನಲ್ಲಿ ನಡೆದ ಖಾತರಿ ಯೋಜನೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಯೋಜನೆಯ ಸಹಾಯಕ ನಿರ್ದೇಶಕರು ತಾ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ನೀಡಿರುವ ವರದಿ ಈ ರೀತಿ ಇದೆ.

ಐದು ಕಾಮಗಾರಿಗಳು ಕ್ರಿಯಾಯೋಜನೆಯಲ್ಲಿದ್ದು, ಅವುಗಳ ಅಂದಾಜು ಪತ್ರಿಕೆ 2007-08ರ ಗ್ರಾಮ ಸ್ವರಾಜ್ ಯೋಜನೆಯಲ್ಲಿನ ಕಾಮಗಾರಿಗಳ ಅಂದಾಜು ಪತ್ರಿಕೆಯನ್ನೇ ಪುನಃ 2010-11ನೇ ವರ್ಷದ ಖಾತರಿ ಯೋಜನೆಯಡಿ ಎಂದು ತಿದ್ದಲಾಗಿದೆ.

ಇತರೆ ಹತ್ತು ಕಾಮಗಾರಿಗಳಲ್ಲಿ ಅಧಿಕೃತ ಎನ್.ಎಂ.ಆರ್, ಖರ್ಚಿನ ದಾಖಲೆ ಹಾಗೂ ಕೆಲ ಕಾಮಗಾರಿಗಳ ಫೋಟೊ ಅಂದಾಜು ಪತ್ರಿಕೆ ಇರುವುದಿಲ್ಲ. ಸದರಿ ಕಾಮಗಾರಿಗಳ ಪೈಕಿ ಆವರಣ ಗೋಡೆಗಳ ಕೆಲಸ ಮಾತ್ರ ಆಗಿದ್ದು ಚರಂಡಿ ಎಂದು ಇರುವಲ್ಲಿ ಹಿಂದಿನ ಕಾಮಗಾರಿಯ ಶೇ 30ರಷ್ಟು ಕೆಲಸ ಸುವರ್ಣಗ್ರಾಮ ಹಾಗೂ ಸ್ವಚ್ಛಗ್ರಾಮ ಗ್ರಾಮ ಯೋಜನೆಯಲ್ಲಿ ಆಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಅಲ್ಲದೇ ದೋಟಿಹಾಳ ಮುಸಲ್ಮಾನ ಸಮಾಜದ ಖಬರಸ್ತಾನ, ನವನಗರ ಶಾಲಾ ಆವರಣಗೋಡೆ, ಗ್ರಂಥಾಲಯ ಆವರಣಗೋಡೆ, ದೋಟಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣಗೋಡೆ, ತೇರಿನ ಮನೆಯಿಂದ 50 ಮೀ ರಸ್ತೆ ದುರಸ್ತಿ ಈ ಕಾಮಗಾರಿಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರುವುದಿಲ್ಲ. ಆದರೆ ಖಬರಸ್ತಾನದ ಕಾಮಗಾರಿ ಮಾತ್ರ ಕಂಡುಬಂದಿದ್ದರೂ ಖರ್ಚಾದ ಬಗ್ಗೆ ನಗದು ಪುಸ್ತಕದಲ್ಲಿ ಮಾಹಿತಿ ಇಲ್ಲ.

ಪಂಚಾಯಿತಿಗೆ ಭೇಟಿ ನೀಡಿ ತನಿಖೆ ನಡೆಸಿದ ಸಂದರ್ಭದಲ್ಲಿ ಎನ್.ಎಂ.ಆರ್, ಕೂಲಿಹಣ ಪಾವತಿಸಿದ ಬಗೆಗಿನ ಯಾವುದೇ ಅಧಿಕೃತ ದಾಖಲೆಗಳು ಇರಲಿಲ್ಲ ಎಂಬುದನ್ನು ತನಿಖೆಗೆ ನೇಮಕಗೊಂಡಿದ್ದ ಸಹಾಯಕ ನಿರ್ದೇಶಕರು ವರದಿಯಲ್ಲಿ ನಮೂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.