ADVERTISEMENT

ನೀತಿ ಸಂಹಿತೆ ಉಲ್ಲಂಘನೆ: ಕ್ರಮ ಕೈಗೊಳ್ಳದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 10:02 IST
Last Updated 18 ಏಪ್ರಿಲ್ 2013, 10:02 IST

ಯಲಬುರ್ಗಾ: ಹೆಜ್ಜೆ ಹೆಜ್ಜೆಗೂ ನೀತಿ ಸಂಹಿತೆ ಉಲ್ಲಂಘನೆಯಾದರೂ ಸಂಬಂಧಪಟ್ಟ ಜಾಗೃತದಳದವರಾಗಲಿ, ಪೊಲೀಸ್ ಅಧಿಕಾರಿಯಾಗಲಿ, ಚುನಾವಣಾಧಿಕಾರಿಯಾಗಲಿ ಯಾರು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದಾಗಿ ಸಾರ್ವಜನಿಕರು ಆರೋಪಿಸುತ್ತಾರೆ.

ಬಹುತೇಕ ಪಕ್ಷದವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದಲೇ ಪ್ರಚಾರ ಕೈಗೊಂಡು ನಾಮಪತ್ರ ಸಲ್ಲಿಸಲು ಆಗಮಿಸುತ್ತಿದ್ದರೂ ಯಾವುದೇ ಪ್ರಕರಣ ದಾಖಲಾಗಿಲ್ಲ. ವಿವಿಧ ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಟಂಟಂ, ಜೀಪು, ಕಾರ್, ಟ್ರ್ಯಾಕ್ಸ್ ಸೇರಿದಂತೆ ಇನ್ನಿತರ ವಾಹನಗಳು ಪಟ್ಟಣದಲ್ಲಿ ಆಗಮಿಸಿದ್ದರೂ ಅವುಗಳ ಬಗ್ಗೆ ಚುನಾವಣಾಧಿಕಾರಿಗಳಾಗಲಿ ಪೊಲೀಸರಾಗಲಿ ನಿಗಾವಹಿಸದೇ ಮೌನವಹಿಸಿದ್ದಾರೆ.

ಮುಖ್ಯವಾಗಿ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಕೂಡದು ಎಂದು ಕಟ್ಟು ನಿಟ್ಟಿನ ಆದೇಶವಿದ್ದರೂ ರಾಜಕೀಯ ಪಕ್ಷದವರು ಇದನ್ನು ಪಾಲಿಸದೆ ನಿರ್ಲಕ್ಷಿಸುತ್ತಿರುವ ಬಗ್ಗೆ  ಅಧಿಕಾರಿಗಲೂ ಯಾವುದೇ ರೀತಿಯಲ್ಲಿ ಆಕ್ಷೇಪಿಸುತ್ತಿಲ್ಲ, ಈ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಚುನಾವಣೆ ನೀತಿ ಸಂಹಿತೆಯನ್ನು ಪರಿಪಾಲನೆ ಮಾಡುವ ವಿಶೇಷ ಅಧಿಕಾರಿಗಳು ಜನರ ಟೀಕೆಗೆ ಗುರಿಯಾಗಿದ್ದಾರೆ. ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಕೆಜೆಪಿ ಪಕ್ಷದ ಸಿ.ಎಚ್. ಪೊಲೀಸ್‌ಪಾಟೀಲ ಅವರ ಬೆಂಬಲಿಗರಾಗಿ ಆಗಮಿಸಿದ್ದ ಶ್ರುತಿ ಜೊತೆಗೆ ಅಗತ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಹಾಜರಿದ್ದರು. ಆದರೆ ಅಧಿಕಾರಿಗಳು ಯಾವ ಕ್ರಮಕ್ಕೆ ಮುಂದಾಗಲಿಲ್ಲ, ಈ ಬಗ್ಗೆ ಸ್ಥಳೀಯ ಪಿಎಸ್‌ಐ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಆದರೆ ಸಿಪಿಐ ನೆಲ್ಲೂರು ಅವರು ಅಗತ್ಯಕ್ಕಿಂತಲೂ ಹೆಚ್ಚಿನ ಜನರು ಇರುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಹೆಚ್ಚಿನ ಸದಸ್ಯರನ್ನು ಹೊರಗಡೆ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.