ADVERTISEMENT

ನೀತಿ ಸಂಹಿತೆ: ಪ್ರಚಾರ ಫಲಕಗಳ ತೆರವು

ಚುನಾವಣಾ ನೀತಿ ಸಂಹಿತೆ ಜಾರಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 13:20 IST
Last Updated 29 ಮಾರ್ಚ್ 2018, 13:20 IST

ಯಲಬುರ್ಗಾ: ತಾಲ್ಲೂಕಿನಾದ್ಯಂತ ವಿವಿಧ ಪಕ್ಷದವರು ಬರೆಯಿಸಿದ್ದ ಗೋಡೆ ಬರಹಗಳನ್ನು ಚುನಾವಣಾ ನೀತಿ ಸಂಹಿತೆ ಕಾರಣ ಅಳಿಸಿ ಹಾಕಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸುಣ್ಣ ಬಣ್ಣ ಹಚ್ಚಿ ಮುಚ್ಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.ಕೆಲವೊಂದು ಗ್ರಾಮದಲ್ಲಿ ಪ್ರತಿರೋಧ ವ್ಯಕ್ತವಾಗಿದೆ. ಸ್ವಂತ ಮನೆಯ ಮುಂದೆ ಅಳಿಸಿಹಾಕಲು ಬಿಡುವುದಿಲ್ಲ ಎಂದು ಮನೆ ಮಾಲೀಕರು ತಕರಾರು ಮಾಡಿದ್ದಾರೆ. ನಂತರ ಅಧಿಕಾರಿಗಳು ವಾಸ್ತವಾಂಶ ಮನವರಿಕೆ ಮಾಡಿ ಅಳಿಸಿ ಹಾಕಿದ್ದಾರೆ.

ತಾಲ್ಲೂಕಿನ ಶಿರಗುಂಪಿ ಗ್ರಾಮದಲ್ಲಿ ಗೋಡೆ ಬರಹ ತೆರವುಗೊಳಿಸಲು ಸರ್ಕಾರದ ಆದೇಶ ಪ್ರತಿ ತೋರಿಸುವಂತೆ ಪಟ್ಟು ಹಿಡಿದಿದ್ದಾರೆ. ಆನಂತರ ಅಳಿಸಿಹಾಕಲು ಅವಕಾಶ ಕೊಟ್ಟಿದ್ದಾರೆ. ಹಾಗೆಯೇ ಕಾತ್ರಾಳ ಗ್ರಾಮದಲ್ಲಿ ಐದಾರು ಕಡೆ ಇದ್ದ ಗೋಡೆ ಬರಹಗಳನ್ನು ಬಣ್ಣ ಹಚ್ಚಿ ಮುಚ್ಚಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ ತಿಳಿಸಿದ್ದಾರೆ.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಅಳವಡಿಸಲಾಗಿದ್ದ ಸರ್ಕಾರದ ಸಾಧನೆ ಬ್ಯಾನರ್ ಅನ್ನು ತೆಗೆಯದೆ, ತಿರುವಿ ಹಾಕಲಾಗಿದೆ. ತಾಲ್ಲೂಕು ಪಂಚಾಯಿತಿ ಅಧಿಕಾರಿ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಲೋಕಜನಶಕ್ತಿ ಪಕ್ಷದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ದಾನಕೈ ಆಗ್ರಹಿಸಿದ್ದಾರೆ. ಕೆಲವು ಕಡೆ ಜಾತ್ರೆಯ ಪ್ರಯುಕ್ತ ಕಟ್ಟಿದ್ದ ಕೇಸರಿ ಬಣ್ಣದ ಪರಿಕರಗಳನ್ನು ಕಿತ್ತುಹಾಕಿದ್ದು, ಕೆಲ ಯುವಕರು ಪ್ರತಿರೋಧಿಸಿದರು. ಚುನಾವಣೆ ನಂತರದಲ್ಲಿ ಕಟ್ಟಿಕೊಳ್ಳುವಂತೆ ಮುಖ್ಯಾಧಿಕಾರಿ ಸಮಾಧಾನ ಪಡಿಸಿದ ನಂತರ ಯುವಕರು ಮೌನವಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.