ADVERTISEMENT

ನೆನೆಗುದಿಗೆ ಬಿದ್ದಿ ಗ್ರಾಮ ಸಡಕ್ ಯೋಜನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 8:45 IST
Last Updated 25 ಫೆಬ್ರುವರಿ 2012, 8:45 IST

ಸಿಂಧನೂರು:  ರಾಯಚೂರು-ಗಂಗಾವತಿ ಮುಖ್ಯ ರಸ್ತೆಯಿಂದ ರೈತ ನಗರಕ್ಯಾಂಪ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಗ್ರಾಮ ಸಡಕ್ ಯೋಜನೆಯಲ್ಲಿ 2 ಕೋಟಿ ಹಣ ಮಂಜೂರಾಗಿ ಎರಡು ವರ್ಷ ಗತಿಸಿದರೂ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಶಾಸಕರ ಮತ್ತು ಗುತ್ತಿಗೆದಾರರ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣವೆನ್ನಲಾಗಿದೆ.

ಗುತ್ತಿಗೆದಾರರು ರೈತನಗರ ಕ್ಯಾಂಪ್‌ನಲ್ಲಿರುವ ಕೆರೆಯೊಂದರ ಮರಂ ಹಾಕುವುದಾಗಿ ಹೇಳಿದರೆ, ಬೂದಿವಾಳಕ್ಯಾಂಪ್‌ನಿಂದ ಮರಂ ತಂದು ಹಾಕಬೇಕೆಂದು ಹೇಳಿದ್ದರಿಂದ, ತಮಗೆ ಬೂದಿವಾಳಕ್ಯಾಂಪ್‌ನಿಂದ ಸಾಗಾಣಿಕೆ ಮಾಡಲು ಖರ್ಚು ಅಧಿಕವಾಗುತ್ತದೆ ಮತ್ತು ಕ್ರಿಯಾ ಯೋಜನೆಯಲ್ಲಿ ಅಳವಡಿಸಿದ ಹಣ ಸಾಕಾಗುವುದಿಲ್ಲ ಎಂದು ಗುತ್ತಿಗೆದಾರರು ವಾದಿಸಿ ತಮಗೆ ಟೆಂಡರ್‌ನಲ್ಲಿ ಒಪ್ಪಂದವಾದ ರಸ್ತೆಯನ್ನು ಇಲ್ಲಿಯವರೆಗೆ ಕೈಗೆತ್ತಿಕೊಂಡಿರುವುದಿಲ್ಲ.
 

ಹಲವಾರು ಬಾರಿ ಗ್ರಾಮಸ್ಥರು ಗ್ರಾಮ ಸಡಕ್ ಯೋಜನೆಯ ಮನವಿ ಸಲ್ಲಿಸಿದರೂ ಪ್ರತಿಫಲ ಶೂನ್ಯವಾಗಿದೆ ಎಂದು ರೈತ ನಗರಕ್ಯಾಂಪ್‌ನ ಹುಲುಗಪ್ಪ, ಹನುಮಪ್ಪ ಮತ್ತಿತರರು ಆರೋಪಿಸುತ್ತಾರೆ.

ರೈತನಗರ ಕ್ಯಾಂಪ್ ಮತ್ತು ಕುರುಬರ ಕ್ಯಾಂಪ್‌ನ ನಿವಾಸಿಗಳು ಮತ್ತು ವಿದ್ಯಾರ್ಥಿಗಳು ಇದೇ ರಸ್ತೆಯ ಮೂಲಕ ಸಿಂಧನೂರಿಗೆ ಬರಬೇಕಾಗಿದ್ದು ರಸ್ತೆಯಲ್ಲಿ ವಿಪರೀತ ಪ್ರಮಾಣದಲ್ಲಿ ತಗ್ಗು-ದಿನ್ನೆಗಳಿರುವುದರಿಂದ ಬಸ್‌ಗಳೇ ಬರುತ್ತಿಲ್ಲ. ಇನ್ನು ಮುಂದಾದರೂ ಆದಷ್ಟು ಶೀಘ್ರ ಗ್ರಾಮ ಸಡಕ್ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಯನ್ನು ಆರಂಭಿಸಬೇಕೆನ್ನುವುದು ರೈತ ನಗರಕ್ಯಾಂಪ್‌ನ ನಿವಾಸಿಗಳ ಆಗ್ರಹ.

ವಾಹನ ಸಂಚಾರ ಇಲ್ಲದ ಕಾರಣಕ್ಕಾಗಿಯೇ ನಾಲ್ಕೈದು ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಿದ್ದಾರೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿ ವರ್ಗದವರು ರಸ್ತೆ ಹದಗೆಟ್ಟಿರುವ ಬಗ್ಗೆ ಕಿಂಚಿತ್ತು ಗಮನಹರಿಸದೇ ಇರುವುದು ಕ್ಯಾಂಪ್ ನಿವಾಸಿಗಳಲ್ಲಿ ಅಸಮಾಧಾನ ತಂದಿದೆ.

ಶಾಸಕ ವೆಂಕಟರಾವ್ ನಾಡಗೌಡರು ಬೂದಿವಾಳಕ್ಯಾಂಪ್ ಮರಂ ಹಾಕುವಂತೆ ಗುತ್ತಿಗೆದಾರರಿಗೆ ಹೇಳಿದ ಕಾರಣಕ್ಕಾಗಿಯೇ ಕಾಮಗಾರಿ ನೆನೆಗುದಿಗೆ ಬ್ದ್ದಿದಿರುವುದನ್ನು ಶಾಸಕರು ಮತ್ತೊಮ್ಮೆ ಆ ಕುರಿತು ಯೋಚಿಸದಿರುವುದೂ ರೈತ ನಗರಕ್ಯಾಂಪ್‌ನ ನಿವಾಸಿಗಳಲ್ಲಿ ಬೇಸರ ಹುಟ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT