ADVERTISEMENT

ಪಟ್ಟಣ ಅಭಿವೃದ್ಧಿ, ಮೂಲ ಸೌಕರ್ಯಕ್ಕೆ ಆದ್ಯತೆ

ನೂತನ ಶಾಸಕ ಬಸವರಾಜ ದಡೇಸೂಗೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 12:25 IST
Last Updated 22 ಮೇ 2018, 12:25 IST

ಕಾರಟಗಿ: ’ಅಹಂಕಾರ, ಹಣ, ಅಧಿಕಾರದ ದರ್ಪದ ವ್ಯಕ್ತಿಯನ್ನು ತಿರಸ್ಕರಿಸಿ, ನನ್ನ ಮೇಲೆ ಪ್ರೀತಿ, ವಿಶ್ವಾಸ ಇರಿಸಿ ಮತ ನೀಡಿ ಗೆಲ್ಲಿಸಿರುವ ಕ್ಷೇತ್ರದ ಮತದಾರರ ಋಣ ತೀರಿಸುತ್ತೇನೆ’ ಎಂದು ನೂತನ ಶಾಸಕ ಬಸವರಾಜ ದಡೇಸೂಗೂರ ಹೇಳಿದರು.

ಸೋಮವಾರ ಕಾರಟಗಿ ಪುರಸಭೆ ನೀಡಿದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಪಟ್ಟಣದ ಜನತೆಗೆ ಅಗತ್ಯ ಸೌಕರ್ಯ ಒದಗಿಸುತ್ತೇನೆ. ಸರ್ಕಾರದ ಅನುದಾನ ತಂದು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈಗಾಗಲೇ ಮಂಜೂರಾಗಿರುವ ಯೋಜನೆಗಳನ್ನು ಆಡಳಿತ ಮಂಡಳಿಯೊಂದಿಗೆ ಸಹಕರಿಸಿ ಶೀಘ್ರದಲ್ಲೇ ಚಾಲನೆ ನೀಡುತ್ತೇನೆ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ ಜಾತಿ, ಮತ, ಪಂಥ, ರಾಜಕೀಯದ ಬೇಧವಿಲ್ಲದೇ ಸರ್ವರ ಕಷ್ಟ ಸುಖಗಳಿಗೆ ಸದಾ ಸ್ಪಂದಿಸಿ, ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆಯ ವಾತಾವರಣಕ್ಕೆ ಆದ್ಯತೆ ನೀಡುತ್ತೇನೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಾಲೋಣಿ ಮಾತನಾಡಿ, ’ಜನರ ಪ್ರೀತಿ, ವಿಶ್ವಾಸವಿದ್ದರೆ ಜನರು ಶಾಶ್ವತವಾಗಿ ಅಧಿಕಾರ ನೀಡುವರು. ಜನಪ್ರತಿನಿಧಿಗಳಾದವರಿಗೆ ಈ ಎಚ್ಚರ ಇರಬೇಕು ಎಂಬ ಸಂದೇಶವನ್ನು ಕನಕಗಿರಿ ಕ್ಷೇತ್ರದ ಜನ ನೀಡಿದ್ದಾರೆ. ಹಿಂಬಾಲಕರ  ಸಲಹೆ, ಸೂಚನೆಗಳನ್ನು ಪಾಲಿಸಿ, ಸ್ವಾರ್ಥ ಸಾಧಿಸುವ ಹಿತಶತ್ರುಗಳನ್ನು ಅಪ್ಪಿಕೊಂಡರೆ ಮಾಜಿ ಗಳಾಗುವುದು ಖಚಿತ’ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

ಇದೇ ವೇಳೆ ಶಾಸಕ ಬಸವರಾಜ್ ದಡೇಸೂಗೂರ ಅವರನ್ನು ಸನ್ಮಾನಿಸ ಲಾಯಿತು.ಮುಖಂಡರಾದ ಬಿಲ್ಗಾರ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಪುರಸಭೆ ಅಧ್ಯಕ್ಷೆ ಭುವನೇಶ್ವರಿ ಶಿವರೆಡ್ಡಿ ನಾಯಕ, ಉಪಾಧ್ಯಕ್ಷೆ ಮಹಾದೇವಿ ಲಕ್ಷ್ಮಣ ಭಜಂತ್ರಿ, ಮುಖ್ಯಾಧಿಕಾರಿ ಡಾ. ಎನ್. ಶಿವಲಿಂಗಪ್ಪ ಸದಸ್ಯರಾದ ಸಿದ್ರಾಮಯ್ಯಸ್ವಾಮಿ ಹಿರೇಮಠ, ಜಿ. ತಿಮ್ಮನಗೌಡ, ಕೆ. ಸಂಗನಗೌಡ, ಡಿ. ಹೊಳೆಯಪ್ಪ, ಮಾರುತಿ ಆರ್‌ಸಿಸಿ, ಅನೂಷಾ ಕುಳಗಿ, ಯುಸೂಫ್, ಶಂಕರ್ ದೇವಿಕ್ಯಾಂಪ್‌, ವಿಶೇಷ ಎಪಿಎಂಸಿ ಸದಸ್ಯ ನಾಗರಾಜ್ ಅರಳಿ ಪ್ರಮುಖರಾದ ಜೆ. ರಾಮರಾವ್, ಬೂದಿ ಪ್ರಭುರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.