ಕನಕಗಿರಿ: ಬಸವಾ ಹಾಗೂ ಇಂದಿರಾ ಆವಾಜ್ ವಸತಿ ಯೋಜನೆಯಲ್ಲಿ ಇಲ್ಲಿನ ಗ್ರಾಮ ಪಂಚಾಯಿತಿಗೆ ಒಟ್ಟು 320 ಮನೆಗಳು ಮಂಜೂರಿಯಾಗಿವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕಡಿವಾಳರ ತಿಳಿಸಿದರು.
ಬಸವಾ ವಸತಿ ಯೋಜನೆಗೆ ಸಂಬಂಧಿಸಿದಂತೆ ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಕರೆದ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಗುಡಿಸಲು ಮುಕ್ತ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಬಸವಾ ವಸತಿ ಯೋಜನೆ ಪೂರಕವಾಗಿದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತ, ಅಂಗವಿಕಲ ಹಾಗೂ ಮಾಜಿ ಸೈನಿಕರು ಇತರೆ ವರ್ಗದವರಿಗೂ ಸಮರ್ಪಕವಾಗಿ ಹಂಚಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಖಾಲಿ ನಿವೇಶನ ಇದ್ದವರು ಮಾತ್ರ ಅರ್ಜಿ ಸಲ್ಲಿಸಿ ಎಂದು ಅವರು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಹಾಬಳೇಶ್ವರ ಮಾತನಾಡಿ ವಸತಿ ಯೋಜನೆಯಲ್ಲಿ ಮಹಿಳೆಯರು ಇಲ್ಲದಿದ್ದ ಸಮಯದಲ್ಲಿ ವಿಧುರರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಮಗಂಡಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಬಸರಿಡದ, ನೋಡಲ್ ಅಧಿಕಾರಿ ಯಂಕಪ್ಪ, ತಾಪಂ ಸದಸ್ಯೆ ಬಿ. ಸರ್ವಮಂಗಳಾ, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು,
ಅರ್ಜಿ, ಗೊಂದಲ: ಗ್ರಾಮ ಸಭೆಯಲ್ಲಿ ವಸತಿ ರಹಿತ ಜನ ಅರ್ಜಿ ಸಲ್ಲಿಸಲು ವೇದಿಕೆಗೆ ನುಗ್ಗಿದ್ದ ಕಾರಣ ಗೊಂದಲ ನಿರ್ಮಾಣವಾಯಿತು, ಅರ್ಜಿ ಸಲ್ಲಿಸಲು ತಾ ಮುಂದು, ನೀ ಮುಂದು ಎನ್ನುತ್ತಲೆ ವೇದಿಕೆ ಮುಂದೆ ಕೂಡಿದ್ದು ಕಂಡು ಬಂತು, ಸಾಂಕೇತಿಕವಾಗಿ ಇಬ್ಬರಿಂದ ಅರ್ಜಿ ಸ್ವೀಕರಿಸಲಾಗುವುದು ತಡೆಯಿರಿ ಎಂದು ಅಧಿಕಾರಿಗಳು ಕೂಗಿದರೂ ಜನ ನಿಯಂತ್ರಣಕ್ಕೆ ಬರಲಿಲ್ಲ.
ನಂತರ ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿ ಕಾರ್ಯಾಲಯ ಹಾಗೂ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಯಿತು. ಸಬ್ ಇನ್ಸ್ಪೆಕ್ಟರ್ ಎಚ್. ಬಿ. ನರಸಿಂಗಪ್ಪ ಬೀಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.