ADVERTISEMENT

ಭೂಮಿ ಫಲವತ್ತತೆಗೆ ಸಾವಯವ ಕೃಷಿ ವಿಧಾನ ಅಳವಡಿಸಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 8:20 IST
Last Updated 23 ಫೆಬ್ರುವರಿ 2011, 8:20 IST

ಕೊಪ್ಪಳ: ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಮಿತಿಮೀರಿದ ಕ್ರಿಮಿನಾಶಕ ಬಳಕೆಯಿಂದ ರೈತರ ಭೂಮಿ ಬಂಜರಾಗುತ್ತಿದೆ.ಭೂಮಿಯ ಫಲವತ್ತತೆ ಕಾಯ್ದುಕೊಂಡು ಬರಲು ರೈತರು ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಆಗತ್ಯವಾಗಿದೆ ಎಂದು  ಶಾಸಕ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.

ವಾರ್ತಾ ಇಲಾಖೆ, ಕೃಷಿ ಇಲಾಖೆ ಹಾಗೂ ಓಲೇಕಾರ ಶಿಕ್ಷಣ ಮತ್ತು ಕಲ್ಯಾಣ ಸಂಸ್ಧೆ ಸಂಯುಕ್ತ ಆಶ್ರಯದಲ್ಲಿ  ತಾಲ್ಲೂಕಿನ ಹೂವಿನಾಳ ಗ್ರಾಮಲ್ಲಿ  ಡಾ.ಭಾಗೀರಥ ತರಬೇತಿ ಕೇಂದ್ರದ ಅವರಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸಾವಯವ ಕೃಷಿ ಕುರಿತ  ವಿಚಾರ ಸಂಕಿರಣ ಉದ್ಘಾಟಿಸಿ  ಅವರು  ಮಾತನಾಡುತಿದ್ದರು.

ಪೂರ್ವಿಕರು ಅನುಸರಿಸುತ್ತಿರುವ ಕೃಷಿ ವಿಧಾನಗಳ ಬದಲಾಗಿ ಹೆಚ್ಚು ಫಸಲುಪಡೆಯಬೇಕು. ಆರ್ಥಿಕ ಮುನ್ನಡೆ ಸಾಧಿಸಬೇಕೆಂಬ ಆಸೆಯಿಂದ ರೈತರು ಇಂದು ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದು. ಬೆಳೆಗಳಿಗೆ ರೋಗ ಬಾಧೆ ತಾಗದಿರಲಿ ಎನ್ನುವ ಉದ್ದೇಶದಿಂದ ಆತಿಯಾದ ಕೀಟನಾಶಕ ಬಳಸುತ್ತಿರುವುದರಿಂದ ಆಹಾರ ವಿಷಯುಕ್ತವಾಗುತ್ತಿದೆ. ಭೂಮಿ ತನ್ನ ಫಲವತ್ತತೆ ಕಳೆದುಕೊಂಡು ಬಂಜರಾಗುತ್ತಿದೆ. ಇದರಿಂದ ರೈತರು ಕೃಷಿಯಲ್ಲಿ ಹಲವಾರು ಸಂಕಟ ಎದುರಿಸುವಂತಾಗಿದೆ. ಅಲ್ಲದೆ ರೈತರ ಆತ್ಮಹತ್ಯೆ ಪ್ರಕಣಗಳೂ ಹೆಚ್ಚುತ್ತಿವೆ. ಕೀಟನಾಶಕಯುಕ್ತ ಆಹಾರ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ  ರೈತರು ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಕೃಷಿಯಲ್ಲಿ  ನಿರೀಕ್ಷಿತ ಇಳುವರಿ ಬಾರದಿರುವಾಗ ಕೃಷಿಯ ಜೊತೆಗೆ ರೈತರು ಹೈನುಗಾರಿಕೆೆ, ಕುರಿಸಾಕಣೆ, ಜೇನುಕೃಷಿ, ಎರೆಹುಳುಗೊಬ್ಬರ ತಯಾರಿಕೆ, ಗೃಹಕೈಗಾರಿಕೆಗಳನ್ನು ಅಳವಡಿಸಿಕೊಂಡು ಅರ್ಥಿಕ ಪ್ರಗತಿ ಸಾಧಿಸಬೇಕು. ಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಸಂಘಟಿತರಾಗಿ ಸರ್ಕಾರದ ಯೋಜನೆಗಳನ್ನು ಸುದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಹುಲಕೋಟಿ  ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರೊ. ಎಸ್.ಕೆ. ಮುದ್ಲಾಪೂರ ಮಾತನಾಡಿ, ರೈತರ ಜಮೀನುಗಲ್ಲಿ ಇಳುವರಿ ಕಡಿಮೆಯಾಗಲು ನೀರಿನ ಕೊರತೆ, ಹವಾಮಾನ ಏರುಪೇರು, ಮಣ್ಣಿನ ಫಲವತ್ತತೆ ಕೊರತೆ ಕಾರಣವಾಗಿರಬಹುದು. ರೈತರಲ್ಲಿ ಶ್ರಮದ ಕೊರತೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ರೈತರ ಭೂಮಿಯ 100 ಕೆ.ಜಿ ಮಣ್ಣಿಲ್ಲಿ  5.ಕೆ.ಜಿ ಸಾವಯವ ವಸ್ತುಗಳು ಇದ್ದಾಗ ಮಣ್ಣು ಫಲವತ್ತತೆ ಎನಿಸಿಕೊಳ್ಳುತ್ತದೆ. ಭೂಮಿಯಲ್ಲಿನ  ಕೃಷಿ ತ್ಯಾಜ್ಯ ವಸ್ತುಗಳನ್ನು ಸುಡುವುದನ್ನು ನಿಲ್ಲಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ  ಬಳಸಿಕೊಳ್ಳುವುದರಿಂದ ಭೂಮಿ ಫಲವತ್ತತೆ ಕಾಯ್ದುಕೊಂಡು ಬರಲು ಸಾಧ್ಯ ಎಂದು  ಅಭಿಪ್ರಾಯಪಟ್ಟರು.  

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ವಿ.ವಿರೂಪಾಕ್ಷಪ್ಪ, ಸಾವಯವ ಕೃಷಿ ಪರಿವಾರದ ಅಧ್ಯಕ್ಷ ವೆಂಕಣ್ಣ ಗ್ಯಾನಪ್ಪನವರ, ಸಾವಯವ ಕೃಷಿ ಮಿಷನ್ ಜಿಲ್ಲಾ  ಸಂಚಾಲಕ ವೆಂಕನಗೌಡ ಮೇಟಿ ಮಾತನಾಡಿದರು.ಜಿಲ್ಲಾ  ಪಂಚಾಯಿತಿ ಉಪಾಧ್ಯಕ್ಷೆ ಡಾ.ಸೀತಾ ಹಲಗೇರಿ  ಕೃಷಿ ಇಲಾಖೆ ಹೊರ ತಂದಿರುವ ಸಾವಯವ ಕೃಷಿ ಕುರಿತ ಹೊತ್ತಿಗೆ  ಬಿಡುಗಡೆಗೊಳಿಸಿದರು.

ಜಿಲ್ಲಾ  ಪಂಚಾಯಿತಿ ಸದಸ್ಯ ನಾಗನಗೌಡ, ತಾಪಂ ಸದಸ್ಯೆ ಕರಿಯಮ್ಮ ಹೊಸಳ್ಳಿ, ಗ್ರಾಪಂ ಅಧ್ಯಕ್ಷ ನಿಂಗಪ್ಪ ಬಡಿಗೇರ, ಓಲೇಕಾರ ಸಂಸ್ಧೆ ಅಧ್ಯಕ್ಷ ಪಾಂಡುರಂಗ ಓಲೇಕಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜಿಲ್ಲಾ  ವಾರ್ತಾಧಿಕಾರಿ ಬಸವರಾಜ ಅಕಳವಾಡಿ ಸ್ವಾಗತಿಸಿದರು. ಜಂಟಿ ಕೃಷಿ ನಿರ್ದೇಶಕ ಎಲ್.ಎನ್. ಬೆಳವಣಿಕಿ ಪ್ರಾಸ್ತಾವಿಕ ಭಾಷಣ ಮಾಡಿದರು. ಉಮೇಶ ಪರಡ್ಡಿ  ನಿರೂಪಿಸಿದರು.ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.