ADVERTISEMENT

ಮಾಹಿತಿ ಹಕ್ಕು ಕಾಯ್ದೆ: ಅಕ್ರಮಕ್ಕೆ ಕಡಿವಾಣ

ತರಬೇತಿ ಕಾರ್ಯಾಗಾರದಲ್ಲಿ ಡಾ. ಸುರೇಶ್ ಇಟ್ನಾಳ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 10:21 IST
Last Updated 6 ಡಿಸೆಂಬರ್ 2013, 10:21 IST

ಕೊಪ್ಪಳ: ಮಾಹಿತಿ ಹಕ್ಕು ಕಾಯ್ದೆ-2005 ಜಾರಿಗೆ ಬಂದ ನಂತರ ಆಡಳಿತದಲ್ಲಿ ಪಾರದರ್ಶಕತೆ ಬಂದಿರು­ವು­ದರಿಂದ, ಅಕ್ರಮಕ್ಕೆ ಕಡಿವಾಣ ಬಿದ್ದಂತಾ­ಗಿದೆ ಎಂದು ಹೆಚ್ಚುವರಿ ಜಿಲ್ಲಾಧಿ­ಕಾರಿ ಡಾ. ಸುರೇಶ್ ಇಟ್ನಾಳ್ ಅವರು ಗುರುವಾರ ಇಲ್ಲಿ ಹೇಳಿದರು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಜಿಲ್ಲಾಡಳಿತ ಮತ್ತು ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಿರುವ ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕರಿಗೆ ಜವಾಬ್ದಾರಿ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ ಎಂಟು ವರ್ಷಗಳೇ ಕಳೆದಿವೆ ಆದರೂ ಸಮ­ರ್ಪಕ ಅರಿವು ಇಲ್ಲದ ಕಾರಣ ಅನುಷ್ಠಾ­ನದಲ್ಲಿ ಅಧಿಕಾರಿಗಳು ಹಲವು ಗೊಂದ­ಲ­ಗಳಿಗೆ ಒಳಗಾಗುತ್ತಿದ್ದಾರೆ. ಎಷ್ಟೋ ಜನ ಮಾಹಿತಿ ಆಯೋಗದಿಂದ ದಂಡ ತೆತ್ತು ತೊಂದರೆಯನ್ನೂ ಅನುಭವಿಸು­ವಂತಾಗಿದೆ. ಈ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿ ಸಮಗ್ರ ಅರಿವು ಹೊಂದಿದಾಗ ಮಾತ್ರ ತೊಂದರೆ­ಯಿಂದ ಮುಕ್ತವಾಗಬ­ಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ,  ಮಾಹಿತಿ ಹಕ್ಕು ಕಾಯ್ದೆ ಅಭಿವೃದ್ಧಿಗೆ ಪೂರಕವಾ­ಗಿದ್ದು, ಇದರಿಂದಾಗಿ ಸಾರ್ವಜನಿಕ­ರಲ್ಲಿಯೂ ಸಾಮಾಜಿಕ ಜವಾಬ್ದಾರಿಗೆ ಪ್ರೋತ್ಸಾಹ ನೀಡುವಂತಿದೆ ಎಂದರು.

ತರಬೇತಿ ಕಾರ್ಯಕ್ರಮಕ್ಕೆ ಬೋಧಕ­ರಾಗಿ ಆಗಮಿಸಿದ್ದ ಸಿ. ಅಶೋಕ, ಕಾಯ್ದೆಯ ಬಗ್ಗೆ ಅಧಿಕಾರಿಗಳು, ಸಿಬ್ಬಂದಿ ಸಮರ್ಪಕವಾಗಿ ಅನುಷ್ಠಾನ­ಗೊ­ಳಿಸುವಲ್ಲಿ ಅಡ್ಡಿ-ಆತಂಕಗಳನ್ನು ಎದುರಿಸುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಿಂದ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.

ಮಲ್ಲೇಶಪ್ಪ ಮತ್ತು ಜಿ.ಜಿ. ಹೆಗಡೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವ­ಹಿಸಿದ್ದರು. ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಲಾಯಖ್ ಅಲಿ  ಉಪಸ್ಥಿತರಿದ್ದರು. 

ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಶಿಬಿರದಲ್ಲಿ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.