ಯಲಬುರ್ಗಾ: ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಗಳ ನೆರವೇರಿಸಲು ಮಾ.19ರಂದು ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಕಂದಾಯ ಭವನದಲ್ಲಿ ಸೋಮವಾರ ಪೂರ್ವಭಾವಿ ಸಭೆಯಲ್ಲಿ ನಡೆಸಿದ ಅವರು, ’ಚಿಕ್ಕೊಪ್ಪ ಗ್ರಾಮದಲ್ಲಿ ₹25 ಕೋಟಿ ವೆಚ್ಚದ ಸ್ನಾತಕೋತ್ತರ ಕೇಂದ್ರದ ಶಂಕುಸ್ಥಾಪನೆ, ತಳಬಾಳ ಗ್ರಾಮದಲ್ಲಿ ₹25 ಕೋಟಿ ವೆಚ್ಚದ ವಸತಿ ಶಾಲೆ, ತಳಕಲ್ ಗ್ರಾಮದಲ್ಲಿ ಕೌಶಲ ಕೇಂದ್ರ, ಗುನ್ನಾಳ ಗ್ರಾಮದಲ್ಲಿ ₹20 ಕೋಟಿ ವೆಚ್ಚದಲ್ಲಿ ಪಾಲಿಟೆಕ್ನಿಕ್, ಕುಕನೂರ ಪಟ್ಟಣದಲ್ಲಿ ₹4 ಕೋಟಿ ಹಾಗೂ ತಳಕಲ್ಗೆ ₹3.5 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣಗಳ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ’ ಎಂದರು.
’ಈ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ಕೃಷ್ಣಾ ಬಿಸ್ಕಿಂ ಯೋಜನೆಯ ಜಾರಿಗೊಳಿಸಲು ಬೇಕಾದ ಕಾಲುವೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. 1,400 ಎಕರೆ ಭೂಮಿ ಖರೀದಿಗಾಗಿ ₹70 ಕೋಟಿ ಮಂಜೂರು ಆಗಿದೆ. ಪ್ರತಿ ಎಕರೆಗೆ 10 ಲಕ್ಷ ಪರಿಹಾರ ನೀಡಲು ಸಂಬಂಧಪಟ್ಟ ಅಧಿಕಾರಿಗೆ ಚೆಕ್ ವಿತರಣಾ ಕಾರ್ಯ ನಡೆಯಲಿದೆ’ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಎಂ ಕನಗವಲ್ಲಿ, ಜಿಲ್ಲಾ ಆಹಾರ ಇಲಾಖೆ ನಿರ್ದೇಶಕಿ ಸಿ.ಡಿ. ಗೀತಾ, ತಹಸೀಲ್ದಾರ ರಮೇಶ ಅಳವಂಡಿಕರ್, ಕೆ.ತಿಮ್ಮಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.