ADVERTISEMENT

ಯುವ ಕಾಂಗ್ರೆಸ್ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 5:00 IST
Last Updated 3 ಅಕ್ಟೋಬರ್ 2012, 5:00 IST

ಗಂಗಾವತಿ: ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಸಾರ್ವಜನಿಕರ ಮೇಲುಂಟಾಗುತ್ತಿರುವ ಪರಿಣಾಮ ಖಂಡಿಸಿ ತಾಲ್ಲೂಕಿನ ಶ್ರೀರಾಮನಗರದಲ್ಲಿ ಸೋಮವಾರ ಕನಕಗಿರಿ ಬ್ಲಾಕ್ ಕಾಂಗ್ರೆಸ್‌ನ ಯುವ ಘಟಕದಿಂದ ಜೆಸ್ಕಾಂಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಯುವ ಘಟಕ ರಾಜ್ಯ ಕರೆಯ ಮೇರೆಗೆ ಹಿರಿಯ ಮುಖಂಡ ವೆಂಕಟರಾಜು ಅವರ ನಿವಾಸದಿಂದ ಕನಕಗಿರಿ ಕ್ಷೇತ್ರದಿಂದ ಟಿಕೆಟ್ ಅಕಾಂಕ್ಷಿ ಅಭ್ಯರ್ಥಿ ಮುಕುಂದರಾವ್ ಭವಾನಿಮಠ ಅವರ ನೇತೃತ್ವದಲ್ಲಿ ಮೆರವಣಿಗೆ ಹೊರಟ ಕಾರ್ಯಕರ್ತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು.

ಅಸಮರ್ಪಕ ಮತ್ತು ಕಳಪೆ ಗುಣಮಟ್ಟದ ವಿದ್ಯುತ್ ಪೂರೈಕೆಯಿಂದ ಕೃಷಿ ಚಟುವಟಿಕೆಯ ಮೇಲೆ ಉಂಟಾಗುತ್ತಿರುವ ಪರಿಣಾಮ ಉದ್ಭವಾಗುತ್ತಿರುವ ಕುಡಿಯವ ನೀರಿನ ಸಮಸ್ಯೆ ಇತ್ಯಾದಿಗಳ ಬಗ್ಗೆ ಮುಖಂಡರು ಮಾತನಾಡಿದರು.

ವಿದ್ಯುತ್ ಸಮಸ್ಯೆ ನಿಭಾಯಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ಎಡವಿದೆ. ಪರಿಣಾಮ ಅರ್ಧ ರಾಜ್ಯ ಕತ್ತಲೆಯಲ್ಲಿ ಇನ್ನರ್ಧ ರಾಜ್ಯ ಕಗ್ಗತ್ತಲಲ್ಲಿದೆ. ಈ ಕೂಡಲೆ ರಾಜ್ಯ ಬಿಜೆಪಿ ಸರ್ಕಾರ ರಾಜೀನಾಮೆ ನೀಡಿ ಮನೆಗೆ ಹೋಗಬೇಕೆಂದು ಧರಣಿಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷ ವೆಂಕಟಕೃಷ್ಣ (ನಾನಿ) ವಿಜಯಲಕ್ಷ್ಮಿ, ವಿಶ್ವನಾಥ ರೆಡ್ಡಿ, ಕುಂಟೋಜಿ ಮರಿಯಪ್ಪ, ನೆಕ್ಕಂಟಿ ರಾಮಕೃಷ್ಣ, ಮುಷ್ಟೂರುಕ್ಯಾಂಪ್ ಸತೀಷ್, ಗ್ರಾಮ ಪಂಚಾಯಿತಿ ಸದಸ್ಯ ಬುಲ್ಲಿಕಾಪು ಮೊದಲಾದವರಿದ್ದರು.

ಕರೆ ಮರೆತ ನಗರ ಘಟಕ
ರಾಜ್ಯದಲ್ಲಿ ಉದ್ಭವಿಸಿರುವ ವಿದ್ಯುತ್ ಬಿಕ್ಕಟ್ಟು ಪರಿಹಾರಕ್ಕೆ ರಾಜ್ಯ ಸರ್ಕಾರ ತಳೆದ ನಿರ್ಲಕ್ಷ್ಯ, ವಿದ್ಯುತ್ ಸಮಸ್ಯೆಯಿಂದ ಸಾರ್ವಜನಿಕರ ಮೇಲೆ ಉಂಟಾಗುತ್ತಿರುವ ಪರಿಣಾಮ ಮನದಟ್ಟು ಮಾಡಿಕೊಡಲು ಯುವ ಕಾಂಗ್ರೆಸ್ ಸೋಮವಾರ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು.

ರಾಜ್ಯ ಮತ್ತು ಕೊಪ್ಪಳ ಜಿಲ್ಲೆಯ ಬಹುತೇಕ ಎಲ್ಲೆಡೆ ಯುವ ಕಾಂಗ್ರೆಸ್ ಪ್ರತಿಭಟನೆ ಮಾಡಿ ಗಮನ ಸೆಳೆಯಿತು. ಆದರೆ ಕಾಂಗ್ರೆಸ್ಸಿನ ರಾಜ್ಯ ಯುವ ಘಟಕದ ಕರೆ ಅದೇಕೋ ಗಂಗಾವತಿ ನಗರ ಮತ್ತು ಗ್ರಾಮೀಣ ಘಟಕಗಳ ಕಿವಿಗೆ ಬೀಳಲಿಲ್ಲ.

ಪರಿಣಾಮ ಎಲ್ಲೆಡೆ ಯುವ ಘಟಕಗಳು ವಿದ್ಯುತ್ತಿಗೆ ಆಗ್ರಹಿಸಿ ಜೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕಿದರೆ, ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದ ಯುವ ಘಟಕಗಳಿಗೆ ಗರ ಬಡಿದಂತಾಗಿತ್ತು. ಇದು ಕ್ಷೇತ್ರದಲ್ಲಿನ ಕಾಂಗ್ರೆಸ್ ಪಕ್ಷದ ಕ್ರೀಯಾಶೀಲತೆ ತೋರಿಸಿ  ಕೊಟ್ಟಂತಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.