ADVERTISEMENT

ರೈಸ್‌ಪಾರ್ಕ್ ಸ್ಥಾಪನೆ ಸಹಕಾರ: ತಂಗಡಗಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 9:55 IST
Last Updated 13 ಜನವರಿ 2012, 9:55 IST

ಕಾರಟಗಿ: ಸಾರ್ವಜನಿಕ, ಸರ್ಕಾರದ ಸಹಯೋಗದೊಂದಿಗೆ ಸ್ಥಾಪನೆಯಾಗುವ ಬಹುಮಹತ್ವಾಕಾಂಕ್ಷೆಯ ರೈಸ್ ಟೆಕ್ನಾಲಜಿ ಪಾರ್ಕಗೆ ಸಂದಂಧಿಸಿದ ಭೂಮಿ, ಹಣ ಮೊದಲಾದ ವಿಷಯಗಳ ಬಗೆಗೆ ಈಗಾಗಲೆ ಮುಖ್ಯಮಂತ್ರಿ ಸದಾನಂದಗೌಡ ಸೇರಿದಂತೆ ವಿವಿಧ ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ.

ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ವಿಶೇಷ ಎಪಿಎಂಸಿ ಆಡಳಿತ ಮಂಡಳಿಯವರು ಸತತ ಪ್ರಯತ್ನ ನಡೆಸಿದರೆ ಅವರೊಂದಿಗೆ ನಾನೂ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಮಾಜಿ ಸಚಿವ, ಶಾಸಕ ಶಿವರಾಜ್ ತಂಗಡಗಿ ಭರವಸೆ ನೀಡಿದರು.

ಗುರುವಾರ ಇಲ್ಲಿಯ ವಿಶೇಷ ಎಪಿಎಂಸಿಯಲ್ಲಿ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸುತ್ತಾ ಮಾತನಾಡಿದ ಅವರು ಇದೂವರೆಗೆ ಘಟಕ ಸ್ಥಾಪಿಸಲು ಬಂದಿರುವ ಅರ್ಜಿ, ಅವಶ್ಯವಿರುವ ಭೂಮಿ, ಲಭ್ಯ ಇರುವ ಸರ್ಕಾರದ ಭೂಮಿ, ಖರೀದಿಸಬೇಕಾದ ಭೂಮಿ, ರೈಸ್‌ಟೆಕ್ ಪಾರ್ಕ್‌ಗೆ ಚಾಲನೆ ಮೊದಲಾದ ವಿಷಯಗಳ ಬಗೆಗೆ ಮಾಹಿತಿ ಪಡೆದರು.

ವಿಶೇಷ ಎಪಿಎಂಸಿ ಅಧ್ಯಕ್ಷ ಬಿ. ಜಿ. ಅರಳಿ, ಉಪಾಧ್ಯಕ್ಷ ಜಿ. ರಾಮಮೋಹನರಾವ್, ಕಾರ್ಯದರ್ಶಿ ಶಾಂತಾರಾಮ್, ಸದಸ್ಯರಾದ ಬಸವನಗೌಡ ಆದಾಪೂರ, ಮೈಲಾಪೂರ ವಿರುಪಾಕ್ಷಗೌಡ ಮೊದಲಾದವರು ಯೋಜನೆಯ ಚಾಲನೆಗೆ ಮಾಡಬೇಕಾದ ಕಾರ್ಯಗಳ ಕುರಿತು ಮಾಹಿತಿ ನೀಡಿ ಚರ್ಚಿಸಿದರು.

ಎಪಿಎಂಸಿ ಆಡಳಿತ ಮಂಡಳಿ ಕೆಲ ಷರತು ಪೂರೈಸಿದರೆ ರಾಜೀವಗಾಂಧಿ ಕಾರ್ಪೋರೇಷನ್ ಒಟ್ಟು ಭೂಮಿಗೆ ನೀಡಬೇಕಾದ ಹಣ ನೀಡುವುದಲ್ಲದೇ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಅಭಿವೃದ್ಧಿಪಡಿಸಲಿದೆ. ಉದ್ದಿಮೆ ಸ್ಥಾಪಿಸುವವರಿಗೆ ಭೂಮಿ ನೀಡಿದ ಮೇಲೆ ಬಂದ ಹಣದಲ್ಲಿ ಖರ್ಚನ್ನು ತಗೆದ ಬಳಿಕ ಕಾರ್ಪೋರೇಷನ್‌ಗೆ ಉಳಿದ ಹಣದಲ್ಲಿ ಶೇಕಡಾ 30ರಷ್ಟು ಪಾಲು ನೀಡಬೇಕಾಗುತ್ತದೆ. ಈಗಾಗಲೆ ಅವರೊಂದಿಗೆ ಚರ್ಚಿಸಲಾಗಿದೆ. ಇದರ ನಿಮಿತ್ಯ ಬೆಂಗಳೂರಿಗೆ ಬಂದರೆ ಅಲ್ಲಿ ಸಭೆ ನಡೆಸಿ ಯೋಜನೆ ಜಾರಿಗೆ ತೀವ್ತೆ ಹೆಚ್ಚಿಸೋಣ ಎಂದು ಶಾಸಕರು ಸಭೆಗೆ ತಿಳಿಸಿದರು.

ವಿಶ್ವಾಸಾರ್ಹ ಸಂಸ್ಥೆಯ ಷರತ್ತಿಗೆ ನಾವು ಬದ್ಧ, ಅದಕ್ಕೂ ಮೊದಲು ಭೂಮಿ ನೀಡುವ ರೈತರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸುವುದಾಗಿ ಆಡಳಿತ ಮಂಡಳಿಯವರು ತಿಳಿಸಿದರು.

ವಿಶೇಷ ಎಪಿಎಂಸಿ ಸದಸ್ಯರಾದ ಶರಣಪ್ಪ ಭಾವಿ, ವೆಂಕೋಬಣ್ಣ ಶ್ರೇಷ್ಠಿ, ಹೇಮಾ ದೇಶಪಾಂಡೆ, ಬೂದಿರಡ್ಡೆಪ್ಪ ನಾಯಕ, ಸಿದ್ಧನಗೌಡ ಮಾಲಿಪಾಟೀಲ್, ಮುಕ್ತುಂಸಾಬ, ದುರ್ಗಾರಾವ್  ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.