ADVERTISEMENT

ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳದಿರಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:56 IST
Last Updated 18 ಡಿಸೆಂಬರ್ 2013, 5:56 IST

ಕುಷ್ಟಗಿ: ತಾಲ್ಲೂಕಿನ ಅಡವಿಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ವಿರುದ್ಧ ಗ್ರಾಮದ ಕೆಲ ವ್ಯಕ್ತಿಗಳು ಅನಗತ್ಯ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ದೂರಿರುವ ಗ್ರಾಮಸ್ಥರು, ಸಂಬಂಧಿಸಿದ ಶಿಕ್ಷಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳ­ದಂತೆ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸೋಮವಾರ ಶಿಕ್ಷಣಾಧಿ­ಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದ ಗ್ರಾಮದ ಪ್ರಮುಖರು, ಕೆಲ ಚುನಾಯಿತ ಪ್ರತಿನಿಧಿಗಳು, ಅಡ­ವಿಭಾವಿ ಶಾಲೆಯ ಮುಖ್ಯಶಿಕ್ಷಕ ಸೇರಿ 9 ಜನ ಶಿಕ್ಷಕರು ಕಳೆದ ತಿಂಗಳು ವಿಜಾ­ಪುರಕ್ಕೆ ಶಿಕ್ಷಕ ಸಂಬಂಧಿ ಒಬ್ಬರ ಮದು­ವೆಗೆ ಹೋಗುವುದಕ್ಕೆ ಎಸ್‌ಡಿಎಂಸಿ ಸದಸ್ಯರ ಅನುಮತಿ ಪಡೆದು­ಕೊಂಡಿ­ದ್ದರು. ಇದನ್ನೇ ಕಾರಣವಾ­ಗಿರಿಸಿ­ಕೊಂಡು ಶಿಕ್ಷಕರನ್ನು ಅಮಾನತು­ಗೊಳಿ­ಸು­ವಂತೆ ಕೆಲವರು ಇಲಾಖೆಯ ಮೇಲೆ ಒತ್ತಡ ಹೇರುತ್ತಿರುವುದರ ಹಿಂದೆ ದುರುದ್ದೇಶವಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಸದರಿ ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಒಂದು ವೇಳೆ ಕ್ರಮ ಕೈಗೊಂಡರೆ ಶೈಕ್ಷಣಿಕ ವಾತಾವರಣ ಹದಗೆಡುತ್ತದೆ ಹಾಗಾಗಿ ಕೆಲವೇ ವ್ಯಕ್ತಿಗಳ ಮಾತಿಗೆ ಕಿವಿಗೊಡಬಾರದು ಎಂದು ಮನವಿಮಾಡಿದ್ದಾರೆ.

ಗ್ರಾಮದ ಶರಣಪ್ಪ ಮಾದರ ನೇತೃತ್ವದಲ್ಲಿ ಕೆಲ ಯುವಕರು ನಿತ್ಯವೂ ಶಾಲೆಗೆ ವಿನಾಕಾರಣ ಭೇಟಿ ನೀಡಿ ಶಿಕ್ಷಕರು ಹಾಗೂ ಬಿಸಿಯೂಟ ಅಡುಗೆ­ದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಪಾಂಡುರಂಗ ಪುರೋಹಿತ ವನವಿ ಸ್ವೀಕರಿಸಿದರು.

ಎಪಿಎಂಸಿ ಅಧ್ಯಕ್ಷ ಹನಮಗೌಡ ಪೊಲೀಸ್ ಪಾಟೀಲ, ನೇತೃತ್ವದಲ್ಲಿ ಗ್ರಾಮಸ್ಥರಾದ ರಾಮಣ್ಣ ಹನುಮ­ಸಾಗರ, ಹನುಮಪ್ಪ, ಸಂಗಪ್ಪ ಮಲಕಾ­ಪುರ, ಸತ್ಯನಗೌಡ ಮಾಲಿಪಾಟೀಲ, ಮಂಜುನಾಥ ಕುಂಬಾರ, ಲಕ್ಷ್ಮಪ್ಪ ಹೂಲಗೇರಿ, ಯಂಕನಗೌಡ, ಮುದ­ಕಪ್ಪ, ಸಣ್ಣಹನುಮಪ್ಪ ಹನುಮಸಾಗರ, ಪರಸಪ್ಪ, ಹನುಮಪ್ಪ ಶಿವನಗುತ್ತಿ, ರಾಮಪ್ಪ ವಡಿಗೇರಿ, ಹನುಮಪ್ಪ ತೋಪ­­ಲ­ಕಟ್ಟಿ ನಿಯೋಗದಲ್ಲಿದ್ದರು.

ಮೇಲಧಿಕಾರಿಗಳ ಅನುಮತಿ ಇಲ್ಲದೇ ಒಂಭತ್ತು ಜನ ಶಿಕ್ಷಕರು ಮದುವೆಗೆ ತೆರಳುವ ಮೂಲಕ ಕರ್ತವ್ಯಲೋಪ ಎಸಗಿದ್ದು ಅವರ ಮೇಲೆ ಶಿಸ್ತಿನ ಕ್ರಮಕ್ಕೆ ಒತ್ತಾಯಿಸಿ ಇತ್ತೀಚೆಗ ಶಾಲೆಗೆ ಬೀಗ ಹಾಕಿ ಗ್ರಾಮದ ಕೆಲವರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.