ADVERTISEMENT

ಶುಲ್ಕ ಪಾವತಿ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 5:45 IST
Last Updated 19 ಅಕ್ಟೋಬರ್ 2012, 5:45 IST

ಕೊಪ್ಪಳ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಸುವುದನ್ನು ಸ್ಥಗಿತಗೊಳಿಸಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಮುಖಂಡ ಶಿವಾನಂದ ಬಿರಾದಾರ, ರಾಜ್ಯದಲ್ಲಿರುವ 6 ಲಕ್ಷ ಬಡ  ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಈಗಾಗಲೇ 2ಎ, 3ಎ ಮತ್ತು 3ಬಿ ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸಿದ್ದು, ಕೂಡಲೇ ಈ ಶುಲ್ಕದ ಹಣವನ್ನು ಹಿಂತಿರುಗಿಸಬೇಕು
ಎಂದು  ಒತ್ತಾಯಿಸಿದರು.

ಪ್ರವರ್ಗ-1ಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಒಂದು ಲಕ್ಷದ ಒಳಗಡೆ ಆದಾಯ ಮಿತಿಯನ್ನು                          ನಿಗದಿಪಡಿಸಬೇಕು, ಪ್ರವರ್ಗ 2ಎ, 3ಎ ಮತ್ತು 3ಬಿ ಗೆ ಸೇರಿದವರಿಗಾಗಿ ರೂ. 44,500 ಒಳಗೆ ಆದಾಯ ಮಿತಿ ನಿಗದಿ ಮಾಡಿ ಆದೇಶ ಹೊರಡಿಸಬೇಕು, ಹಣಕಾಸು ಇಲಾಖೆಯು ಶೈಕ್ಷಣಿಕ ವರ್ಷ ಮುಗಿಯುವ ಹಂತದಲ್ಲಿ ಶುಲ್ಕದ ಹಣವನ್ನು ಬಿಡುಗಡೆ ಮಾಡುತ್ತಿದೆ.

ಇದನ್ನು ಬದಲಿಸಿ,ಶೈಕ್ಷಣಿಕ ವರ್ಷದ ಪ್ರಾರಂಭ  ಹಾಗೂ ಮಧ್ಯದ ಹಂತದಲ್ಲಿ ಹಣ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು, ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ಗಳನ್ನು ಪ್ರಾರಂಭಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಸಂಘಟನೆಯ ನಗರ ಕಾರ್ಯದರ್ಶಿ ರಾಕೇಶ ಪಾನಘಂಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗವಿಸಿದ್ದಪ್ಪ ಜಂತಕಲ್, ಕೃಷ್ಣಕುಮಾರ, ವೀರೇಶ ಕೂಲಿ, ನವೀನ್, ಪ್ರಶಾಂತ, ನಾಗರಾಜ ಕಂದಗಲ್, ಹನಮೇಶ ಮರಡಿ ನೇತೃತ್ವ  ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.