ಗಂಗಾವತಿ: ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಮಾ.3 ಮತ್ತು 4ರಂದು ಗ್ರಾಮ ದೇವತೆ ಊರಮ್ಮ ಹಾಗೂ ಅದಿ ದೇವತೆ ಮಲಿಯಮ್ಮ ದೇವಿಯರ ಜಾತ್ರೆಗೆ ಸಕಲ ಸಿದ್ಧತೆ ನಡೆದಿದೆ.
ಗ್ರಾಮದದಲ್ಲಿ ಊರಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಈಗಾಗಲೆ 30 ವರ್ಷ ಕಳೆದಿದ್ದು, ಪ್ರತಿ ಐದು ವರ್ಷಕ್ಕೆ ಒಮ್ಮೆಯಂತೆ ಗ್ರಾಮ ದೇವತೆಯ ಜಾತ್ರೆ ಆಚರಿಸಲಾಗುತ್ತಿದೆ. ಮಾರ್ಚ್ 3ರಂದು ಮಲಿಯಮ್ಮ ದೇವಿಯ ಜಾತ್ರೆ ನಡೆಯಲಿದ್ದು, ಭಕ್ತರಿಗೆ ಮಧ್ಯಾಹ್ನ ಸಿಹಿ ಊಟದ ವ್ಯವಸ್ಥೆ ಮಾಡಲಾಗಿದೆ. ಮಾರನೇ ದಿನ ಊರಮ್ಮ ದೇವಿಯ ಜಾತ್ರೆ ನಡೆಯಲಿದೆ. ಗ್ರಾಮದಲ್ಲಿ ಈಗಾಗಲೇ ಹಬ್ಬದ ವಾತಾವರಣ ನೆಲೆಸಿದೆ.
ಜಾತ್ರೆಯ ಅಂಗವಾಗಿ ಸಾವಿರಾರು ಮೂಕ ಪ್ರಾಣಿಗಳ ಬಲಿ ಕೊಡಲು ಭಕ್ತರು ಸಿದ್ದತೆ ನಡೆಸಿದ್ದಾರೆ. ಈಗಾಗಲೇ ಗ್ರಾಮದ ಪ್ರತಿಯೊಂದು ಮನೆಯ ಮುಂದೆ ಹರಕೆಯ ಕುರಿಗಳನ್ನು ಕಟ್ಟಿಹಾಕಲಾಗಿದೆ. ಜಾತ್ರೆಯ ಎರಡೂ ದಿನಗಳ ರಾತ್ರಿ ಹರಕೆಯ ಕುರಿ–ಕೋಣಗಳನ್ನು ಬಲಿಕೊಡಲಾಗುವುದು’ ಎಂದು ಗ್ರಾಮದ ಯುವಕರು ತಿಳಿಸಿದ್ದಾರೆ. ದೇವಸ್ಥಾನದ ಮುಂದೆ ಬಲಿ ಕೊಡಲು ಈಗಾಗಲೆ ಆಡಳಿತ ಮಂಡಳಿಯಿಂದಲೇ ಐದು ಕೋಣಗಳನ್ನು ತರಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಗ್ರಾಮದ ಪ್ರತಿಯೊಂದು ಮನೆಯಿಂದಲೂ ಹರಕೆಯ ಕುರಿ ಬಲಿ ಕೊಡಲಾಗುತ್ತಿದೆ. ಇದು ಅನಾದಿಕಾಲದಿಂದಲೂ ನಡೆದುಕೊಂಡ ಬಂದ ಸಂಪ್ರದಾಯ’ ಎಂದು ಗ್ರಾಮದ ಹಿರಿಯರಾದ ಫಕೀರಪ್ಪ, ಸಾವಂತ್ರಪ್ಪ, ಮುದುಕಪ್ಪ ಪಲ್ಲೇದ ಹೇಳಿದರು. ಕೇವಲ ಮಲ್ಲಾಪುರ ಮಾತ್ರವಲ್ಲ, ಸುತ್ತಲಿನ ಸಂಗಾಪುರ, ಬಂಡಿಬಸಪ್ಪಕ್ಯಾಂಪ್, ಆನೆಗೊಂದಿ, ಸಿದ್ದಿಕೇರಿ, ಲಕ್ಷ್ಮಿಕ್ಯಾಂಪ್, ಹಿರೇಜಂತಕಲ್, ಬೆಣಕಲ್, ಕರಿಕಲ್ಕ್ಯಾಂಪ್, ಹನುಮನಹಳ್ಳಿ, ಲಕ್ಷ್ಮಿಕ್ಯಾಂಪ್ ಸೇರಿದಂತೆ ಇತರ ಭಾಗದಿಂದ ಬರುವ ಭಕ್ತರು ಹರಕೆಯ ಕುರಿಗಳನ್ನು ಬಲಿ ಕೊಡುತ್ತಾರೆ ಎಂದು ಯುವಕ ಅಜಯ್ ಹೇಳಿದರು.
‘ಧಾರ್ಮಿಕ ಕ್ಷೇತ್ರಗಳಲ್ಲಿ ಹರಕೆಯ ನೆಪದಲ್ಲಿ ಸಾರ್ವಜನಿಕವಾಗಿ ಪ್ರಾಣಿ ಬಲಿ ನೀಡುವುದನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ, ಪೊಲೀಸ್ ಇಲಾಖೆ ಹಾಗೂ ಪ್ರಾಣಿದಯಾ ಸಂಘಟನೆಯವರು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ನಗರದ ಜಯಪ್ರಕಾಶ ನಾರಾಯಣ, ಸುಧೀಂದ್ರರಾವ್ ಕುಲಕರ್ಣಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.