ADVERTISEMENT

ಹನುಮಸಾಗರ 4 ದಿನ ಕತ್ತಲಲ್ಲಿ..!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:43 IST
Last Updated 6 ಡಿಸೆಂಬರ್ 2012, 6:43 IST

ಹನುಮಸಾಗರ :  ವಿದ್ಯುತ್ತಿನ ಏರಿಳಿತದಿಂದಾಗಿ ಇಲ್ಲಿನ ಎರಡು ವಿದ್ಯುತ್ ಪರಿವರ್ತಕಗಳು ಪ್ರಮುಖ ಭಾಗಗಳಲ್ಲಿ ಸುಟ್ಟಿದ್ದರಿಂದಾಗಿ ಕಳೆದ ನಾಲ್ಕು ದಿನಗಳಿಂದ ಇಲ್ಲಿನ ಬಹುತೇಕ ವಾರ್ಡುಗಳು ಕತ್ತಲುಮಯವಾಗಿದ್ದವು. ಆದರೆ ಬುಧವಾರ ಜೆಸ್ಕಾಂ ಇಲಾಖೆಯ ಪ್ರಯತ್ನದಿಂದಾಗಿ ಬುಧವಾರ ಸಾಯಂಕಾಲ ಸಾರ್ವಜನಿಕರು ಬೆಳಕು ಕಾಣುವಂತಾಯಿತು.

ನಾಲ್ಕು ದಿನಗಳಿಂದ ಕಾರ್ಯನಿಲ್ಲಿಸಿದ್ದ ಹಿಟ್ಟಿನ ಗಿರಣಿಗಳು, ನೀರೆತ್ತುವ ಮೋಟರ್‌ಗಳು, ದೂರದರ್ಶನಗಳು ಬುಧವಾರ ಆರಂಭಗೊಂಡಿದ್ದರಿಂದ ಜನರಲ್ಲಿ ಸಂತಸ ತುಂಬಿಕೊಂಡಿತ್ತು. ಬೇರೆ ಕಡೆ ನೀರ ತರಬೇಕಂದ್ರ ಕೊಳವೆ ಬಾವಿಗಳು, ತೆರೆದ ಬಾವಿಗಳೆಲ್ಲ ಬತ್ತಿ ಹೋಗ್ಯಾವ್ರಿ, ನಳ ಬರಲಿಲ್ಲಂದ್ರ ಹನಿ ನೀರು ಸಿಗೋದು ದುಸ್ತಾರ ಐತ್ರಿ, ಈ ನಾಲ್ಕು ದಿನದೊಳುಗ ನೀರಿಗಾಗಿ ನಮಗ ಅಲ್ಲೋಲ ಕಲ್ಲೋಲ ಆಗೈತ್ರಿ, ಇವತ್ತರ ಕರೆಂಟ್ ಬಂತಲ್ರಿ ಅಷ್ಟ ಸಮಾಧಾನ ಎಂದು ಶೇಖರಪ್ಪ ನಿಟ್ಟುಸಿರು ಬಿಡುತ್ತಾರೆ. 4 ಹಾಗೂ 5ನೇ ವಾಡುಗಳಲ್ಲಿ ಪೂರೈಸುತ್ತಿದ್ದ ವಿದ್ಯುತ್ ಪರಿವರ್ತಕ  ಸುಟ್ಟಿದ್ದರಿಂದ ಅಂದಿನಿಂದಲೆ ಆ ಭಾಗದಲ್ಲಿ ವಿದ್ಯುತ್ ನಿಲುಗಡೆಯಾಗಿತ್ತು. ಆದರೆ ಆ ಪ್ರದೇಶದ ಸಾರ್ವಜನಿಕರು ತಮ್ಮ ದಿನನಿತ್ಯದ ಅವಶ್ಯಕತೆಗಳಿಗೆ ಬೇರೆ ವಾಡುರ್ಗಳನ್ನು ಅವಲಂಬಿಸಿದ್ದರು. ಆದರೆ ಮಂಗಳವಾರ ಬೆಳಿಗ್ಗೆ ಮತ್ತೊಂದು ಪರಿವರ್ತಕ ಸುಟ್ಟಿದ್ದರಿಂದ ಹನುಮಸಾಗರದ ಬಹುತೇಕ ಭಾಗಗಳಲ್ಲಿ ಕತ್ತಲುಮಯವಾಗಿದ್ದವು.

ವಿದ್ಯುತ್ ತೊಂದರೆಯಿಂದಾಗಿ ಗಣಕ ಯಂತ್ರಗಳ ಮೂಲಕ ವಿವಿಧ ಉದ್ಯೋಗಗಳಿಗೆ ಆನ್‌ಲೈನ್‌ಲ್ಲಿ ಆಪ್ಲಿಕೇಷನ್ ಹಾಕುವ ಅಭ್ಯರ್ಥಿಗಳು ಬೇರೆ ನಗರಗಳಿಗೆ ಹೋಗುತ್ತಿದ್ದರು. ಪರಿವರ್ತಕ ಸುಟ್ಟ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸದ ಜೆಸ್ಕಾಂ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಈ ಭಾಗಕ್ಕೆ ಅವಶ್ಯಕವಾಗಿದ್ದ 100 ಹಾಗೂ 63 ಕಿಲೋ ವ್ಯಾಟ ಸಾಮರ್ಥ್ಯದ ಎರಡು ಪರಿವರ್ತಕಗಳನ್ನು ಮಧ್ಯಾಹ್ನ ಸಮಯದಲ್ಲಿ ಜೋಡಿಸಿದ್ದರಿಂದ ಕತ್ತಲಾಗಿದ್ದ ಗ್ರಾಮಕ್ಕೆ ಬೆಳಕು ಹರಿದಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.