ADVERTISEMENT

ಹಿಡಿತದಲ್ಲಿಟ್ಟುಕೊಳ್ಳಲು ಶಾಸಕರ ಕಸರತ್ತು

ಕಾರಟಗಿ: 15ರಂದು ಪಂಚಾಯಿತಿ ಅಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 8:11 IST
Last Updated 13 ಡಿಸೆಂಬರ್ 2012, 8:11 IST

ಕಾರಟಗಿ: ಇಲ್ಲಿಯ ಗ್ರಾಮ ಪಂಚಾಯಿತಿಯ ಸದಸ್ಯರ ಸಂಖ್ಯೆ 62. ಹೆಚ್ಚು ಸದಸ್ಯರನ್ನು ಹೊಂದಿದ ಪಂಚಾಯಿತಿಯಲ್ಲಿ ಗುಲ್ಬರ್ಗ ವಿಭಾಗದಲ್ಲೆ ಮೊದಲ, ರಾಜ್ಯದಲ್ಲೆ 2ನೇಯ ಸ್ಥಾನ ಪಡೆದಿದೆ. ಸದಸ್ಯರ ಆಯ್ಕೆ, ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಹೊಂದಾಣಿಕೆಯ ಮೇಲೆಯೆ ನಡೆದ ದಾಖಲೆ ಇದೆ.

ದಾಖಲೆ ಮುರಿಯಲು ಅಧ್ಯಕ್ಷ ಸ್ಥಾನ ತಮ್ಮ ಬೆಂಬಲಿಗರಿಗೆ ಧಕ್ಕಿಸಲು ಶಾಸಕ ಶಿವರಾಜ್ ತಂಗಡಗಿ  ಕಸರತ್ತು, ಲಾಬಿ ನಡೆಸಲು ಮುಂದಾಗಿದ್ದಾರೆ.ವಿವಿಧ ಪಕ್ಷಗಳ ಬೆಂಬಲಿತರ ಸಂಖ್ಯೆ ಹೀಗಿದೆ. ಬಿಜೆಪಿ 23, ಕಾಂಗ್ರೆಸ್ 18, ಜೆಡಿಎಸ್ (ಸಾಲೋಣಿ) 13 ಇನ್ನುಳಿದ ಸದಸ್ಯರನ್ನು ಹೊಂದಿರುವ ಶಾಸಕರು ಸದಸ್ಯರಿಗೆ ಆಮಿಷ ಒಡ್ಡಿದ್ದಾರೆ.

ತಮ್ಮ ತೋಟದಲ್ಲಿ ಭೋಜನ ಕೂಟ ಏರ್ಪಡಿಸಿದ್ದರೆ, ವಿವಿಧ ತಂಡಗಳಲ್ಲಿ ಸದಸ್ಯರು ಮಂಗಳವಾರ ರಾತ್ರಿಯೆ ಪ್ರವಾಸಕ್ಕೆ ತೆರಳುವ ವ್ಯವಸ್ಥೆ ಮಾಡಲಾಗಿದೆ. ಹಣ ಅಥವಾ ಚಿನ್ನ ಸದಸ್ಯರು ಬಯಸಿದಂತೆ  ನೀಡಲಾಗಿದೆ  ಎಂಬ ಆರೋಪ ಕೇಳಿಬರುತ್ತಿದೆ.

ಕಾಂಗ್ರೆಸ್ ಬೆಂಬಲಿತ ಸದಸ್ಯರೊಬ್ಬರನ್ನು ಸಂಪರ್ಕಿಸಿದಾಗ `ನಮ್ಮ ದಾರಿ ನಮಗೆ' ಎಂಬಂತೆ ಪ್ರವಾಸಕ್ಕೆ ಹೊರಟಿದ್ದೇವೆ. ಇಂದು, ನಾಳೆ ಧರ್ಮಸ್ಥಳದಲ್ಲಿ ವಾಸ್ತವ್ಯ ಮಾಡುತ್ತೇವೆ. ಇತರ ಸದಸ್ಯರ ತಂಡಗಳು ಗೋವಾ, ಸಿರಸಿ ಮತ್ತಿತರ ಕಡೆ ತೆರಳಿವೆ. ಪ್ರವಾಸಕ್ಕೆ ತೆರಳಿರುವ ಸದಸ್ಯರ ಸಂಖ್ಯೆ 40ಕ್ಕೂ ಅಧಿಕ ಎಂದರು.

ಆರಂಭದಲ್ಲಿ ಶಾಸಕ ತಂಗಡಗಿ ಮಾಜಿ ಸಚಿವ ಮಾಜಿ ಸಚಿವ ಸಾಲೋಣಿ ನಾಗಪ್ಪ, ಕಾಂಗ್ರೆಸ್ ಧುರೀಣ ಭಗವಂತಪ್ಪ ನಾಯಕ ಅವರೊಂದಿಗೆ ನಾವೆಲ್ಲ ಸೇರಿ ಒಮ್ಮತದ ಅಭ್ಯರ್ಥಿಯನ್ನು ಅಧ್ಯಕ್ಷ, ಉಪಾಧ್ಯಕ್ಷರಾನ್ನಾಗಿಸೋಣ ಎಂಬ ಇಂಗಿತ ವ್ಯಕ್ತಪಡಿಸಿದ್ದರು.

ಭಾನುವಾರ ರೈಸ್‌ಮಿಲ್‌ನಲ್ಲಿ ಸಭೆ ನಡೆದಾಗ ಶಾಸಕರು ತಮ್ಮ ಬೆಂಬಲಿಗರಿಗೆ ಅವಕಾಶ ನೀಡುವಂತೆ ಹಕ್ಕು ಮಂಡಿಸಿದರು. ಶಾಸಕರ ಅಭಿಪ್ರಾಯಕ್ಕೆ ಸಾಲೋಣಿಯವರು ಬ್ರೆಕ್ ಹಾಕಿ, ಹಿಂದಿನ ಅವಧಿಯಲ್ಲಿ ನಿಮ್ಮವರಿಗೆ ಬಿಟ್ಟಿದ್ದೇವೆ. ಈಗ ನಮ್ಮ ಬೆಂಬಲಿಗರು ಆಗಬೇಕು ಎಂದು ಪಟ್ಟು ಹಿಡಿದರು. ಭಗವಂತಪ್ಪ ನಾಯಕ ಸಾಲೋಣಿಯವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದಾಗ. ಸಂಧಾನ ವಿಫಲವಾಗಿತ್ತು.

ಶಾಸಕ ತಂಗಡಗಿ ಬೆಳಗಾವಿಯ ಅಧಿವೇಶನದಲ್ಲಿದ್ದರೂ ಸಾಲೋಣಿ ನಿಟಕವರ್ತಿಗಳೊಂದಿಗೆ ಸತತ ಸಂಪರ್ಕವಿರಿಸಿಕೊಂಡು ತಮ್ಮ ಅಭಿಪ್ರಾಯಕ್ಕೆ ಮನವೊಲಿಸುವ ಯತ್ನ ಮುಂದುವರೆಸಿದರೂ, ಸಾಲೋಣಿ ತಮ್ಮ ಪಟ್ಟು ಸಡಿಲಿಸಲಿಲ್ಲ.

ತಂತ್ರ ಹೂಡಿದ ತಂಗಡಗಿ ಕಾಂಗ್ರೆಸ್ ಮುಖಂಡರ ಮನವೊಲಿಸಿಕೊಂಡುಸಾಲೋಣಿಯವರೊಂದಿಗಿದ್ದ ಅವರ ಒಗ್ಗಟ್ಟು ಮುರಿಯುವಲ್ಲಿ ಯಶಸ್ವಿಯಾದರು. ರಣತಂತ್ರ ಎಣೆದ ಶಾಸಕರು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಕ್ರೋಡೀ ಕರಿಸಿ, ಆಮಿಷ ಒಡ್ಡಿ ಪ್ರಯಾಣಕ್ಕೆ ಅನುವು ಮಾಡಿದರು ಎಂದು ಅವರ ನಿಕಟವರ್ತಿಗಳು ಹೇಳುತ್ತಾರೆ.

ಶನಿವಾರ ಪ್ರಜಾವಾಣಿಯೊಂದಿಗೆ ಮಾತನಾಡಿದ್ದ ಶಾಸಕ ತಂಗಡಗಿ ಮುಂದಿನ ರಾಜಕೀಯ ನಡೆಯನ್ನು ಸಾಲೋಣಿಯವರೊಂದಿಗೆ ನಿರ್ಧರಿಸುವುದಾಗಿ ಹೇಳಿದ ಬೆನ್ನಹಿಂದೆಯೆ ತಮ್ಮ ರಾಜಕೀಯ ಸಾಮರ್ಥ್ಯ ತೋರಿಸಲು ಮುಂದಾಗಿರುವುದು ಆಶ್ಚರ್ಯ ಮೂಡಿಸಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಿದೆ. ತಂಗಡಗಿ ಬೆಂಬಲಿತರು ಅಧ್ಯಕ್ಷರಾಗಿ, ಭಗವಂತಪ್ಪ ಬೆಂಬಲಿಗರು ಉಪಾಧ್ಯಕ್ಷರಾಗಿ 15ರಂದು ಆಯ್ಕೆಯಾಗುವುದು ಬಹತೇಕ ಖಚಿತವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.