ಕುಕನೂರು: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಹಾದೇವಿ ಕಂಬಳಿ ಹೇಳಿದರು. ಸಮೀಪದ ಮನ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಇಟಗಿ ವಲಯದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡು ಸಂಸ್ಕೃತಿಯ ಬೀಡು ಎನ್ನುವುದಕ್ಕೆ ಹಳ್ಳಿಗಳಲ್ಲಿ ಪುರಾತನ ಕಾಲದಿಂದಲೂ ಸಾಂಪ್ರದಾಯಿಕ ಕಲೆಗಳು ಸಾಕ್ಷಿಯಾಗಿವೆ. ಕೋಲಾಟ, ಭಜನೆ, ಸೋಬಾನೆ ಪದಗಳು, ಭಕ್ತಿ ಗೀತೆಗಳು, ಭಾವಗೀತೆಗಳು, ಹಂತಿ ಪದಗಳು ಸೇರಿದಂತೆ ಮತ್ತಿತರೆ ಹಾಡುಗಳು ಹಾಸು ಹೊಕ್ಕಾಗಿವೆ. ಇಂತಹ ಅಪರೂಪ ಕಲೆಗಳನ್ನು ಕರಗತ ಮಾಡಿಕೊಂಡಿರುವ ಮಕ್ಕಳು ತಮ್ಮ ಕೌಶಲಗಳನ್ನು ಪ್ರದರ್ಶಿಸುವುದರಿಂದ ಮುಂದಿನ ಪೀಳಿಗೆಗೂ ಕೊಡುಗೆ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಅಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ ಹೊಂಬಳ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವೈ.ಜಿ.ಪಾಟೀಲ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಹೂನೆಪ್ಪ ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಇಟಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಯ್ಯ ಇಟಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ರಾಮಣ್ಣ ತಳವಾರ, ಸಿ.ಆರ್.ಪಿ ವಿರೂಪಾಕ್ಷಪ್ಪ ಮೆಳ್ಳಿಕೇರಿ, ಗ್ರಾಮ ಪಂಚಾಯಿತಿ ಸದಸ್ಯರಾದ ದೇವಪ್ಪ ಹರಿಜನ, ಯಲ್ಲಮ್ಮ ಹಳ್ಳಿ, ಗಣ್ಯರಾದ ವೆಂಕನಗೌಡ ಬೆನ್ನಳ್ಳಿ, ಶಂಕ್ರಗೌಡ ಬೆನ್ನಳ್ಳಿ, ಮದ್ಯಪ್ಪ ಲಂಬಾಣಿ, ಹಂಚ್ಯಾಳಪ್ಪ ಹಳ್ಳಿ, ಬಾಪುಗೌಡ ಬೀಳಗಿ ಮುಖ್ಯೋಪಾಧ್ಯಾಯ ಗೋಣೆಪ್ಪ ಹಿರೇಮನಿ ಹಾಗೂ ಸರ್ವ ಶಿಕ್ಷಕರು, ವಿವಿಧ ಯುವಕ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.