
ಕನಕಗಿರಿ: ಜಿಲ್ಲಾ ಪಂಚಾಯಿತಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು ಒಳ್ಳೆಯದು, ಆದರೆ ಉದ್ಯೋಗ ಖಾತರಿ ಯೋಜನೆಯ ₨ 4500 ಮೊತ್ತವನ್ನು ವಿಳಂಬವಾಗಿ ನೀಡಲಾಗುತ್ತಿದೆ ಎಂಬ ಅಭಿಪ್ರಾಯವನ್ನು ಇಲ್ಲಿನ ಫಲಾನುಭವಿಗಳು ತಿಳಿಸಿದ ಘಟನೆ ನಡೆಯಿತು.
ಮಂಗಳವಾರ ವೈಯಕ್ತಿಕ ಶೌಚಾಲಯಗಳ ಭೌತಿಕ ಮಟ್ಟ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾ ಪಂಚಾಯಿತಿಯ ಗ್ರಾಮ ಸಂಪನ್ಮೂಲ ಸಂಯೋಜಕರಿಗೆ ಸಾಕಷ್ಟು ಜನ ದೂರಿದರು.
ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಪರಿಶಿಷ್ಟ ಜಾತಿ, ಜನಾಂಗದವರಿಗೆ ₨ 15, 000 ಸಾವಿರ, ಇತರೆ ಜನಾಂಗದವರಿಗೆ ₨ 9200 ನೀಡಲಾಗುತ್ತಿದೆ, ಗ್ರಾಮ ಪಂಚಾಯಿತಿಯವರು ನಿರ್ಮಲ ಭಾರತ ಅಭಿಯಾನ ಯೋಜನೆಯಲ್ಲಿ ₨ 4700 ಚೆಕ್ ನೀಡಿದ್ದಾರೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ₨ 4500 ಹಣ ಖಾತೆಗೆ ಜಮಾವಣೆಗೊಂಡಿಲ್ಲ ಎಂದು ಫಲಾನುಭವಿ ಹುಸೇನಸಾಬ ಲೈನದಾರ ಹೇಳಿದರೆ, ಸಮಾಜ ಕಲ್ಯಾಣ ಇಲಾಖೆಯ ಪ್ರೋತ್ಸಾಹ ಧನ ₨ 5000 ಸಾವಿರ ಇನ್ನೂ ಮಂಜೂರಿಯಾಗಿಲ್ಲ ಎಂದು ಫಲಾನುಭವಿ ರಂಗಪ್ಪ ದೂರಿದರು.
ಚುನಾವಣೆಯ ನೀತಿ ಸಂಹಿತೆ ಸಹ ಈಗ ಖಾತರಿ ಹಣ ನೀಡಲು ಬ್ರೇಕ್ ಹಾಕಿದೆ, ಕಳೆದ ಎರಡು ತಿಂಗಳ ಹಿಂದೆ ಕಟ್ಟಿಸಿಕೊಂಡ ಶೌಚಾಲಯಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಫಲಾನುಭವಿ ಅವರು ದೂರಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಒಟ್ಟು 900 ಶೌಚಾಲಯ ನಿರ್ಮಾಣದ ಗುರಿ ಹಾಕಿಕೊಂಡಿದ್ದು 300ಕ್ಕೂ ಹೆಚ್ಚು ಗುರಿ ಸಾಧಿಸಿದೆ ಎಂದು ಸಂಯೋಜಕ ಕರಿಯಣ್ಣ ಕಾಟಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.