ಕನಕಗಿರಿ: ಮಾರ್ಚ್ ತಿಂಗಳೊಳಗೆ ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಗ್ರಾಮದ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕಡಿವಾಳರ ತಿಳಿಸಿದರು.
ಸ್ಥಳೀಯ ಜಾಮೀಯ ಮಸೀದಿ ಪರಿಸರದಲ್ಲಿ ಬುಧವಾರ ಶೌಚಾಲಯ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
ಪ್ರತಿಯೊಂದು ಕುಟುಂಬವು ಶೌಚಾಲಯ ಹೊಂದುವುದು ಕಡ್ಡಾಯವಾಗಿದೆ, ಈ ನಿಟ್ಟಿನಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಗಿದೆ, ಜಾಬ್ ಕಾರ್ಡ್ ಇಲ್ಲವರಿಗೆ ತಕ್ಷಣವೆ ಮಾಡಿಕೊಡಲಾಗುವದು, ಪರಿಶಿಷ್ಟ ಜಾತಿ, ಪಂಗಡದವರಿಗೆ ₨ 15, ಇತರೆ ಜನಾಂಗದವರಿಗೆ ₨ 9200 ಪ್ರೋತ್ಸಾಹ ಧನ ನೀಡಲಾಗುವುದು, ಶೌಚಾಲಯ ನಿರ್ಮಿಸಲು ಪ್ರೇರಣೆ ನೀಡಿದವರಿಗೂ ಸಹ ತಲಾ ಒಂದು ಶೌಚಾಲಯಕ್ಕೆ ₨ 150 ನೀಡಲಾಗುವುದು ಎಂದರು.
ಸ್ವಯಂ ಸೇವರಕು ಮನೆ, ಮನೆಗೆ ಭೇಟಿ ನೀಡಿದಾಗ ಗ್ರಾಮಸ್ಥರು ಸರಿಯಾದ ಮಾಹಿತಿ ನೀಡಬೇಕೆಂದು ಅವರು ತಿಳಿಸಿದರು.
ಭಾವಚಿತ್ರ, ಬ್ಯಾಂಕ್ ಖಾತೆ, ಪಡಿತರ ಚೀಟಿ, ಇತರೆ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಗೌಸಿಯಾ ಬೇಗಂ, ಆಶಾ ಕಾರ್ಯಕರ್ತೆ ಶ್ರೀದೇವಿ ಮಾದಿನಾಳ ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಮಾಬೀ ಬೇಲ್ದಾರ, ರಾಜಾಸಾಬ ನಂದಾಪುರ, ಪ್ರಮುಖರಾದ ಕಾಶಿಪತಿ ಕಮ್ಮಾರ, ವಿಶ್ವಾರಾಧ್ಯ ಸ್ವಾಮಿ ಚಿಂತಕುಂಟಿಮಠ, ನಟರಾಜ ಮಡಿವಾಳರ, ಹೊನ್ನೂರುಸಾಬ ಅಗರಬತ್ತಿ, ಹುಸೇನಬೀ, ಮೈಬೂಬಿ ಗೋಡೆಕಾರ ಇತರರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.