ADVERTISEMENT

ರಾಹುಲ್‌ ಸಮಾವೇಶಕ್ಕೆ 500 ಬಸ್‌

ಶರತ್‌ ಹೆಗ್ಡೆ
Published 9 ಫೆಬ್ರುವರಿ 2018, 8:57 IST
Last Updated 9 ಫೆಬ್ರುವರಿ 2018, 8:57 IST
ಕೊಪ್ಪಳದ ಜಿಲ್ಲಾಡಳಿತ ಭವನದ ಬಳಿ ರಾಹುಲ್‍ ಗಾಂಧಿ ಸಮಾವೇಶಕ್ಕೆ ಸ್ವಾಗತ ಕೋರುವ ಬ್ಯಾನರ್‍ ಅಳವಡಿಸಿರುವುದು
ಕೊಪ್ಪಳದ ಜಿಲ್ಲಾಡಳಿತ ಭವನದ ಬಳಿ ರಾಹುಲ್‍ ಗಾಂಧಿ ಸಮಾವೇಶಕ್ಕೆ ಸ್ವಾಗತ ಕೋರುವ ಬ್ಯಾನರ್‍ ಅಳವಡಿಸಿರುವುದು   

ಕೊಪ್ಪಳ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕೊಪ್ಪಳ ಹಾಗೂ ಕುಕನೂರಿನಲ್ಲಿ ಇದೇ 10ರಂದು ನಡೆಯುವ ಎರಡು ಬಹಿರಂಗ ಸಮಾವೇಶಗಳಿಗೆ ಜನರನ್ನು ಕರೆತರಲು 500 ಬಸ್‌ಗಳನ್ನು ಬಳಸಲಾಗುತ್ತಿದೆ. ಇದಕ್ಕಾಗಿ ಕಾಂಗ್ರೆಸ್‌ ಪಕ್ಷವು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ₹ 55 ಲಕ್ಷವನ್ನು ಪಾವತಿಸಿದೆ.

‘ಎರಡೂ ಸಮಾವೇಶಗಳಿಗೆ ತಲಾ 250 ಬಸ್‌ಗಳನ್ನು ಒದಗಿಸಲಾಗುವುದು. ಪ್ರತಿ ಬಸ್‌ಗೆ ದಿನವೊಂದಕ್ಕೆ ₹11 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ’ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್‌. ಗದ್ದಿಕೇರಿ ತಿಳಿಸಿದರು.

ರಾಹುಲ್‌ ಭೇಟಿಗಾಗಿ ಸಿದ್ಧತೆಗಳು ನಡೆದಿವೆ. ಜಿಲ್ಲಾಡಳಿತ ಭವನದ ಬಳಿ ನಗರಕ್ಕೆ ಸ್ವಾಗತ ಕೋರುವ ನಗರಸಭೆಯ ಕಮಾನಿನ ಫಲಕವನ್ನು ಮರೆಮಾಚಿ, ಅದರ ಮೇಲೆ 'ನವ ಕರ್ನಾಟಕ ನಿರ್ಮಾಣಕ್ಕೆ ಸರ್ವರಿಗೂ ಸ್ವಾಗತ' ಎಂದು ಬರೆದಿರುವ ಬೃಹತ್‌ ಬ್ಯಾನರ್‌ ಅಳವಡಿಸಲಾಗಿದೆ.

ADVERTISEMENT

‘ನಗರದ ಸಾರ್ವಜನಿಕ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 106 ಹಳ್ಳಿಗಳ ಜನ ಭಾಗವಹಿಸಲಿದ್ದಾರೆ. ಎಲ್ಲ ಹಳ್ಳಿಗಳಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯ ಏಜೆನ್ಸಿಯೊಂದು ಶಾಮಿಯಾನ, ಪ್ರಚಾರ ಫಲಕಗಳ ಅಳವಡಿಕೆ ಗುತ್ತಿಗೆ ಪಡೆದಿದೆ’ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ಅಕ್ಬರ್‌ ಪಾಷಾ ಮಾಹಿತಿ
ನೀಡಿದರು. ‘ಕುಕನೂರಿನ ಸಮಾವೇಶದಲ್ಲಿ 50 ಸಾವಿರ ಜನ ಭಾಗವಹಿಸಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.

ಅಂಕಿ–ಅಂಶ

₹1.50 ಕೋಟಿ ಕೊಪ್ಪಳದಲ್ಲಿ ರಾಹುಲ್‌ ಗಾಂಧಿ ಸಮಾವೇಶಕ್ಕೆ ತಗಲುವ ಒಟ್ಟು ವೆಚ್ಚ

60 ಸಾವಿರ ಕೊಪ್ಪಳ ಸಮಾವೇಶದಲ್ಲಿ ಜನರನ್ನು ಸೇರಿಸುವ ಗುರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.