ADVERTISEMENT

ಅಳವಂಡಿ | ದೂಳಿನ ದಾರಿಯಾದ ರಾಜ್ಯ ಹೆದ್ದಾರಿ

ಗುತ್ತಿಗೆದಾರರ, ಅಧಿಕಾರಿಗಳ ನಿರ್ಲಕ್ಷ್ಯ: ಪ್ರಯಾಣಿಕರ ಆರೋಪ

ಜುನಸಾಬ ವಡ್ಡಟ್ಟಿ
Published 25 ಫೆಬ್ರುವರಿ 2025, 6:13 IST
Last Updated 25 ಫೆಬ್ರುವರಿ 2025, 6:13 IST
ಅಳವಂಡಿ ಸಮೀಪದ ಹಟ್ಟಿ ಹತ್ತಿರ ದೂಳು
ಅಳವಂಡಿ ಸಮೀಪದ ಹಟ್ಟಿ ಹತ್ತಿರ ದೂಳು   

ಅಳವಂಡಿ: ಸಮೀಪದ ಬೆಳಗಟ್ಟಿ- ಅಳವಂಡಿ ನಡುವಿನ ಕಲ್ಮಾಲ-ಶಿಗ್ಗಾಂವ ರಾಜ್ಯ ಹೆದ್ದಾರಿ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದ್ಧು, ಮಂದಗತಿಯ ಕಾಮಗಾರಿಯು ವಾಹನ ಸವಾರರ ಪಾಲಿಗೆ ನರಕ ಸೃಷ್ಟಿಸಿದೆ. ಅಗೆದಿರುವ ರಸ್ತೆಯಲ್ಲಿ ಭಾರಿ ವಾಹನಗಳು ಸಾಗುತ್ತಿರುವುದರಿಂದ ಈ ರಾಜ್ಯ ಹೆದ್ದಾರಿಯೋ...ದೂಳಿನ ಹೆದ್ದಾರಿಯೋ ಎಂಬುದಂತಾಗಿದೆ.

ಅಳವಂಡಿಯಿಂದ ಬೆಳಗಟ್ಟಿವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಇದರಿಂದ ವಾಹನ ಸವಾರರು ತೀರಾ ಸಂಕಷ್ಟ ಅನುಭವಿಸುವಂತಾಗಿತ್ತು. ಆದರೆ ಈ ರಸ್ತೆ ದುರಸ್ತಿ ಕಾಮಗಾರಿಗೆ ಕಳೆದ ವರ್ಷ ಜುಲೈ 28ರಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಅವರು ಚಾಲನೆ ನೀಡಿದ್ದರು. 10 ಕಿ.ಮೀ ಉದ್ದದ ₹ 20 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಲೋಕೋಪಯೋಗಿ ಇಲಾಖೆ ಕಾಮಗಾರಿಯ ಹೊಣೆ ಹೊತ್ತಿದೆ.

ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಏಳೆಂಟು ತಿಂಗಳು ಕಳೆಯುತ್ತಾ ಬಂದರೂ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿಲ್ಲ. ಕಾಮಗಾರಿಗೆ ರಸ್ತೆಯನ್ನು ಸಂಪೂರ್ಣ ಅಗೆಯಲಾಗಿದೆ. ರಸ್ತೆ ಮೂಲಕ ಸಾಕಷ್ಟು ವಾಹನ ಸಂಚಾರ ಮಾಡುವುದರಿಂದ ರಸ್ತೆಯಲ್ಲ ದೂಳು ತುಂಬಿಕೊಂಡು ಮುಂದಿನ ರಸ್ತೆ ಹಾಗೂ ಎದುರಿನ ವಾಹನಗಳು ಕಾಣುವುದಿಲ್ಲ. ಇದರಿಂದ ನಿತ್ಯ ಸಂಚರಿಸುವ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಮಂದಗತಿಯ ಕಾಮಗಾರಿಯಿ‌ಂದ ಬೇಸತ್ತ ವಾಹನ ಸವಾರರು  ಅಧಿಕಾರಿಗಳು ಹಾಗೂ ಗುತ್ತಿಗೆದಾರನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ADVERTISEMENT

ಈ ಹೆದ್ದಾರಿ ಮೂಲಕ ಹೂವಿನ ಹಡಗಲಿ, ರಾಣೆಬೆನ್ನೂರು, ಹರಿಹರ, ಕೊಪ್ಪಳ, ಹೊಸಪೇಟೆ, ಗದಗ ಜಿಲ್ಲೆಯ ಮುಂಡರಗಿಗೆ ಸಾವಿರಾರು ವಾಹನಗಳು ಚಲಿಸುತ್ತವೆ. ಆದರೆ ರಸ್ತೆ ಕಾಮಗಾರಿಯ ದೂಳಿನಿಂದ ನಿತ್ಯ ವಾಹನ ಸವಾರರು ಗೋಳಾಡುವ ಸ್ಥಿತಿ ಎದುರಾಗಿದೆ.

ನಿತ್ಯ ದೂಳಿನ ಸ್ನಾನ: ಬೆಳಗಟ್ಟಿ - ಅಳವಂಡಿ ರಸ್ತೆ ಕಾಮಗಾರಿಯು ಕೆಲವು ಹಲವು ತಿಂಗಳಿನಿಂದ ನಡೆಯುತ್ತಿದ್ದು, ಈ ಕಾಮಗಾರಿಯಿಂದ ಈ ಭಾಗದ ಪರಿಸರ ಹಾಗೂ ರಸ್ತೆಗೆ ಹಚ್ಚಿಕೊಂಡಿರುವ ಮನೆಗಳು ದೂಳುಮಯವಾಗಿ ಮಾರ್ಪಟ್ಟಿವೆ. ದ್ವಿಚಕ್ರ ವಾಹನ ಸವಾರರು ದೂಳಿನಿಂದಾಗಿ ಕಣ್ಣು ಬಿಡುವಂತಿಲ್ಲ. ಹಾಗಾಗಿ ಈ ರಸ್ತೆ ಮೂಲಕ ತೆರಳುವ ಪ್ರಯಾಣಿಕರು ದೂಳಿನ ಸ್ನಾನ ಮಾಡುವಂತಾಗಿದೆ.

‘ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ಯೆಗೆ ನಿತ್ಯ ನೀರು ಹಾಕುವ ಕೆಲಸ ಮಾಡಬೇಕು. ಆದರೆ ದಿನಕ್ಕೆ ಒಂದೆರಡು ಬಾರಿ ನೀರು ಹಾಕುತ್ತಾರೆ. ಒಮ್ಮೊಮ್ಮೆ ನೀರನ್ನೇ ಹಾಕುವುದಿಲ್ಲ. ಹೀಗಾಗಿ ದೂಳಿನ ಸಮಸ್ಯೆ ನಿತ್ಯ ಹೆಚ್ಚಾಗುತ್ತಿದೆ. ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಕುರಿತು ಮಾಹಿತಿ ಪಡೆಯಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ‘ಪ್ರಜಾವಾಣಿ’ ಪ್ರತಿನಿಧಿ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. 

ರಸ್ತೆಯಲ್ಲಿ ಎದ್ದ ಧೂಳು

ಬೆಳಗಟ್ಟಿ ಗ್ರಾಮದ ರಸ್ತೆಯ ಅಕ್ಕಪಕ್ಕದಲ್ಲಿನ ಬಹುತೇಕ ಕುಟುಂಬಗಳಿಗೆ ದೂಳಿನಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು

-ವಿಷ್ಣು ಹಾಳಕೇರಿ ಗ್ರಾ.ಪಂ.ಸದಸ್ಯ ಬೆಳಗಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.