ಕೊಪ್ಪಳ: ’ತುಂಗಭದ್ರಾ ಜಲಾಶಯಕ್ಕೆ ಕಾಯಂ 19ನೇ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಇನ್ನೂ ಆರಂಭವಾಗಿಲ್ಲ. ರಾಜ್ಯ ಸರ್ಕಾರ ತುಂಗಭದ್ರಾ ಮಂಡಳಿ ಮೇಲೆ ಎಲ್ಲ ಜವಾಬ್ದಾರಿ ಹಾಕಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಆರೋಪಿಸಿದರು.
ಬಿಜೆಪಿ ನಿಯೋಗ ಸೋಮವಾರ ಜಲಾಶಯಕ್ಕೆ ಭೇಟಿ ನೀಡಿ ತಾತ್ಕಾಲಿಕವಾಗಿ ಅಳವಡಿಸಿರುವ ಕ್ರಸ್ಟ್ಗೇಟ್ ಪರಿಶೀಲಿಸಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಮಲೆನಾಡಿನ ಭಾಗದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ರಾಜ್ಯ ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ರೈತರ ರಕ್ಷಣೆ ಮಾಡುವವರು ಯಾರು’ ಎಂದು ಪ್ರಶ್ನಿಸಿದರು.
‘ಕ್ರಸ್ಟ್ಗೇಟ್ ಮುರಿದು ಒಂಬತ್ತು ತಿಂಗಳುಗಳೇ ಉರುಳಿದರೂ ವರದಿ ಪಡೆಯದೇ ಸರ್ಕಾರ ಕಾಲಹರಣ ಮಾಡುತ್ತಿದೆ. ಜಲಾಶಯ ನಮ್ಮ ರಾಜ್ಯದಲ್ಲಿಯೇ ಇರುವುದರಿಂದ ಫಲಾನುಭವಿ ರಾಜ್ಯಗಳಾದ ಆಂಧ್ರ ಹಾಗೂ ತೆಲಂಗಾಣಕ್ಕಿಂತ ಕರ್ನಾಟಕದ ಮೇಲೆಯೇ ಹೆಚ್ಚು ಜವಾಬ್ದಾರಿಯಿದೆ. 19ನೇ ಕ್ರಸ್ಟ್ ಗೇಟ್ ಅಳವಡಿಸಲು ₹1.66 ಕೋಟಿಗೆ ಟೆಂಡ್ ನೀಡಲಾಗಿದ್ದು, ಜುಲೈ ಒಳಗೆ ಕಾಮಗಾರಿ ಮುಗಿಯಬೇಕಿದೆ. ಇನ್ನುಳಿದ ಕಾಮಗಾರಿಗಳ ಗತಿ ಏನು’ ಎಂದು ಕೇಳಿದರು.
ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ ‘ಗೇಟ್ ತುಂಡಾದಾಗ ಸಮರೋಪಾದಿಯಲ್ಲಿ ಎಲ್ಲ ಕೆಲಸ ಮಾಡುತ್ತೇವೆ ಎಂದು ಸಚಿವರು ಹೇಳಿದರು. ಇವರ ನಿರ್ಲಕ್ಷ್ಯದಿಂದ ರೈತರು ಈಗ ಕಷ್ಟ ಅನುಭವಿಸುವಂತಾಗಿದೆ’ ಎಂದರು
ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಪ್ರಮುಖರಾದ ರಮೇಶ ವೈದ್ಯ, ಗಣೇಶ ಹೊರತಟ್ನಾಳ್, ಮಂಜುನಾಥ, ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು.
ಮೂರೂ ಬಿಟ್ಟ ಸಚಿವ ತಂಗಡಗಿ‘
‘ನನಗೆ ಕನಿಷ್ಠ ಜ್ಞಾನವೂ ಇಲ್ಲವೆಂದು ಹಾಗೂ ಶೋಕಿಗಾಗಿ ಅಂಗರಕ್ಷಕನನ್ನು ಕೇಳುತ್ತಿದ್ದೇನೆ ಎಂದು ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿಗಿ ನಾಚಿಕೆ ಮಾನ ಹಾಗೂ ಮರ್ಯಾದೆ ಮೂರೂ ಬಿಟ್ಟಿದ್ದಾನೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಮುನಿರಾಬಾದ್ನಲ್ಲಿ ಸೋಮವಾರ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಸಚಿವ ತಂಗಡಗಿ ಅವರ ಹೇಳಿಕೆಗೆ ಕಾಡಾ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಬಸವರಾಜ ‘ನಾನು ಆತನಷ್ಟು ದಡ್ಡನಲ್ಲ. ತಂಗಡಗಿ ನನಗೆ ಜ್ಞಾನವಿಲ್ಲ ಎನ್ನುತ್ತಾನೆ. ನನಗೆ ಜ್ಞಾನ ಇಲ್ಲದಿದ್ದರೆ ಪಕ್ಷ ಇಷ್ಟು ದೊಡ್ಡ ಸ್ಥಾನಮಾನ ನೀಡುತ್ತಿರಲಿಲ್ಲ. ಮಾಜಿ ಶಾಸಕರು ಹಾಗೂ ಸಂಸದರು ಗನ್ಮ್ಯಾನ್ ಕೇಳಲು ಕಾನೂನು ಚೌಕಟ್ಟಿನಲ್ಲಿ ಅವಕಾಶ ಇದೆ. ಗುಪ್ತಚರ ಇಲಾಖೆಯು ನನಗೆ ಗನ್ ಮ್ಯಾನ್ ನೀಡಬೇಕೆಂದು ಮಾಹಿತಿ ನೀಡಿದೆ. ಆದರೂ ನನಗೆ ನನಗೆ ಪೊಲೀಸ್ ಭದ್ರತೆ ಒದಗಿಸುತ್ತಿಲ್ಲ. ಈ ಕುರಿತು ನ್ಯಾಯಾಲಯದ ಮೊರೆ ಹೋಗುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.