ಗಂಗಾವತಿ (ಕೊಪ್ಪಳ ಜಿಲ್ಲೆ): ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದಕ್ಕೆ ಮುಸ್ಲಿಮರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಹನುಮ ಜಯಂತಿ ದಿನವಾದ ಮಂಗಳವಾರ ತಡರಾತ್ರಿ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ನಡೆದಿದೆ.
ಶ್ರೀರಾಮನಗರದ ಕುಮಾರ ರಾಮು ರಾಠೋಡ (25) ಹಲ್ಲೆಗೆ ಒಳಗಾದವರು.
ಶ್ರೀರಾಮನಗರದ ಬಾರ್ನಲ್ಲಿ ಕುಮಾರ ರಾಠೋಡ ಮದ್ಯ ಸೇವನೆ ಮಾಡುತ್ತಿದ್ದಾಗ ಫಿರೋಜ್ ಖಾನ್ ಎಂಬ ವ್ಯಕ್ತಿ ಮದ್ಯದ ಗ್ಲಾಸಿಗೆ ನೀರು ಹಾಕುವಂತೆ ಕೇಳಿದ್ದಾನೆ. ಆಗ ಕುಮಾರ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿ ನೀರು ಹಾಕಿದ್ದ. ‘ಜೈ ಶ್ರೀರಾಮ್’ ಎಂದು ಏಕೆ ಘೋಷಣೆ ಕೂಗಿದೆ ಎಂದು ಫಿರೋಜ್ ಖಾನ್ ತಕರಾರು ತೆಗೆದಿದ್ದು, ಗಲಾಟೆ ತಾರಕಕ್ಕೇರಿದೆ. ಫಿರೋಜ್ ಖಾನ್, ಸಹೋದರ ಸುಲ್ತಾನ್, ಶೇಕ್ಷಾವಲಿ, ನಬಿ, ಶರೀಫ್ ಸೇರಿ 20ಕ್ಕೂ ಹೆಚ್ಚು ಜನರು ಜಾತಿಯನ್ನು ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಕುಮಾರ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.