ಕೊಪ್ಪಳ:ಕೃಷಿಯಲ್ಲಿ ವೈಜ್ಞಾನಿಕತೆ ಅರಿವು ಅತ್ಯಂತ ಮಹತ್ವ. ಮಣ್ಣಿನ ಮತ್ತು ಅನೇಕ ಸಸ್ಯ ತಳಿಗಳ ಸೂಕ್ತವಾದ ಅಧ್ಯಯನದಿಂದ ಅತ್ಯುತ್ತಮ ಇಳುವರಿ ಪಡೆಯಬಹುದು ಎಂದು ಪ್ರಾಚಾರ್ಯ ಪ್ರೊ.ಎಂ.ಎಸ್.ದಾದ್ಮಿ ಹೇಳಿದರು.
ನಗರದ ಶ್ರೀ ಗವಿಸಿದ್ಧೇಶ್ವರಕಾಲೇಜಿನ ರಸಾಯನವಿಜ್ಞಾನ ವಿಭಾಗದಿಂದ 'ಗ್ರೀನ್ ಕೆಮಿಸ್ಟ್ರಿ' ಸರ್ಟಿಫಿಕೇಟ್ ಕೋರ್ಸಿನ ನಿಮಿತ್ತ ಕೈಗೊಂಡ ಕ್ಷೇತ್ರ ಅಧ್ಯಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಕೃಷಿಯ ಬಗ್ಗೆ ಒಲವು ತೋರಿಸಬೇಕು. ಸೂಕ್ತವಾದ ವೈಜ್ಞಾನಿಕ ಅರಿವು ಬೆಳೆಸಿಕೊಳ್ಳಬೇಕು. ಕೃಷಿಯಲ್ಲಿ ಸಾಕಷ್ಟು ಹೆಚ್ಚಿನ ಇಳುವರಿ ಪಡೆದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ರೈತರಿದ್ದಾರೆ. ಆದ್ದರಿಂದ ಪದವಿ ಪಡೆದ ತಾವುಗಳೂ ಸಹ ಸರ್ಕಾರಿ ನೌಕರಿಗೆ ಕಾಯದೆ ಸ್ವಇಚ್ಛೆಯಿಂದ ಕೃಷಿಯಲ್ಲಿ ತೊಡಗಿ ಕೃಷಿಗೆ ಬೇಕಾದ ಮಾಹಿತಿಯನ್ನು ಜಿಲ್ಲೆಯ ಕೃಷಿ ವಿಸ್ತರಣಾಧಿಕಾರಿಗಳಿಂದ ಪಡೆದು ಉತ್ತಮ ಇಳುವರಿ ಬರುವ ಹಾಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಪ್ರಗತಿಪರ ರೈತರಾಗಬೇಕು ಎಂದು ಹೇಳಿದರು.
ಹಾಲವರ್ತಿ ಗ್ರಾಮದ ಪ್ರಗತಿಪರ ರೈತ ಜಡೆಸ್ವಾಮಿಯವರ ತೋಟಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆದರು. ಮತ್ತು ಅಲ್ಲಿನ ಸಾವಯವ ಕೃಷಿ, ಎರೆಹುಳುವಿನ ಗೊಬ್ಬರದ ಬಗ್ಗೆ ಪ್ರಾಯೋಗಿಕವಾಗಿ ಜಡೆಸ್ವಾಮಿಯವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಒಂದು ಎಕರೆಯಲ್ಲಿ 200 ಗಂಧದ ಮರ, 200 ಸಾಗವಾನಿಮರ, ಮಾವು, ನೇರಳೆ, ಕರಿಬೇವು, ಚಿಕ್ಕೂ, ಬಾಳೆ ಸೇರಿದಂತೆ 400ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಇವೆಲ್ಲವೂ ಸಾವಯವ ಕೃಷಿಗಳ ಮೂಲಕ ಬೆಳೆಯಲಾಗಿದೆ ಎಂದು ರೈತ ಜಡೇಸ್ವಾಮಿ ತೋಟದ ವಿಶೇಷತೆಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಗವಿಸಿದ್ಧೇಶ್ವರ ಬಾಳೆ ತೋಟಕ್ಕೂ ಭೇಟಿ ನೀಡಿ, ಅಧ್ಯಯನ ಮಾಡಲಾಯಿತು.
ಕಾಲೇಜಿನ ಪ್ರಾಧ್ಯಾಪಕರಾದಡಾ.ಶಶಿಕಾಂತ ಉಮ್ಮಾಪುರೆ, ಪ್ರಶಾಂತ ಕೋಂಕಲ್, ಡಾ.ದಯಾನಂದ ಸಾಳುಂಕೆ ಹಾಗೂ ವಿಭಾಗದ ಎಲ್ಲ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.