ಗಂಗಾವತಿ: ‘ಅಕ್ರಮ–ಸಕ್ರಮ ಯೋಜನೆಯಡಿ ಸ್ವೀಕರಿಸಲಾದ ಎಲ್ಲ ಅರ್ಜಿಗಳನ್ನು ಫೆಬ್ರುವರಿ ತಿಂಗಳಲ್ಲಿ ಇತ್ಯರ್ಥಪಡಿಸುವುದರ ಜತೆಗೆ ಮೊದಲ ಹಂತದಲ್ಲಿ ಸಾವಿರ ಫಲಾನುಭವಿಗಳಿಗೆ ಭೂಮಿ ವಿತರಿಸಲಾಗುತ್ತದೆ’ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಆವರಣದ ಶಾಸಕರ ಕಚೇರಿಯಲ್ಲಿ ಈಚೆಗೆ ನಡೆದ ಅಕ್ರಮ–ಸಕ್ರಮ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇರಕಲ್ ಗಡ ಹೋಬಳಿ ವ್ಯಾಪ್ತಿಯಲ್ಲಿ 1602, ಗಂಗಾವತಿ ಮತ್ತು ವೆಂಕಟಗಿರಿ ವ್ಯಾಪ್ತಿಯಲ್ಲಿ 1172 ಅರ್ಜಿಗಳು ಸ್ವೀಕೃತವಾಗಿದ್ದು, ಇವುಗಳ ಇತ್ಯರ್ಥದ ಕುರಿತು ತಹಶೀಲ್ದಾರ್ ಜತೆ ಚರ್ಚಿಸಲಾಗುತ್ತದೆ. ಅರಣ್ಯ ಮತ್ತು ಕರಾಬ್ ಭೂಮಿಗಳ ಕುರಿತು ಸಂಪೂರ್ಣವಾದ ಮಾಹಿತಿ ದೊರೆತಿದೆ. ಕೆಲ ಅರಣ್ಯ ಅಧಿಕಾರಿಗಳಿಗೆ ಕೋವಿಡ್ ದೃಢಪಟ್ಟ ಕಾರಣ, ಸಭೆಗೆ ಹಾಜರಾಗಿರುವುದಿಲ್ಲ. ಆದ್ದರಿಂದ ಮತ್ತೊಮ್ಮೆ ಅಧಿಕಾರಿಗಳ ಸಭೆ ಕರೆದು, ಆಕ್ರಮದಿಂದ ಸಕ್ರಮಕ್ಕೆ ಬಂದ ಅರ್ಜಿಗಳನ್ನು ಪರಿಶೀಲಿಸಿ, ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.
ಈಗಾಗಲೇ ಬುಡಶೆಟ್ನಾಳ, ಜಿನ್ನಾಪುರ ಭಾಗದಲ್ಲಿನ ಕೆಲ ರೈತರ ಅರ್ಜಿಗಳು ಇತ್ಯರ್ಥವಾಗಿದ್ದು, ಸದ್ಯದಲ್ಲೇ ಸಾಂಕೇತಿಕವಾಗಿ ನೂರು ಫಲಾನುಭವಿಗಳಿಗೆ ದಾಖಲೆ ವಿತರಿಸಲಾಗುತ್ತದೆ. ಇಲ್ಲಿನ ವೆಂಕಟಗಿರಿ ಹೋಬಳಿಯಲ್ಲಿ ಬಹುತೇಕ ಭೂಮಿಗಳು ಅರಣ್ಯ ಇಲಾಖೆಯ ಸರಹದ್ದು ವ್ಯಾಪ್ತಿಗೆ ಬರುತ್ತವೆ. ಆದ್ದರಿಂದ ಅರ್ಜಿಗಳನ್ನು ಇತ್ಯರ್ಥ ಮಾಡುವಲ್ಲಿ ವಿಳಂಬವಾಗಲಿದೆ’ ಎಂದರು.
ತಹಶೀಲ್ದಾರ್ ಯು.ನಾಗರಾಜ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ರವಿಕುಮಾರ್ ಬಸವರಾಜ ಅಂಗಡಿ, ಆಕ್ರಮ–ಸಕ್ರಮ ಸಮಿತಿ ಸದಸ್ಯರಾದ ರಾಧಾ ಉಮೇಶ, ಕರುಣಾಕರ ಹಾಗೂ ಸಿದ್ದಲಿಂಗಯ್ಯ ಸ್ವಾಮಿ ಗಡ್ಡಿಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.