ಕನಕಗಿರಿ: ಕೊರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಮೇ. 31 ರಿಂದ ಜೂ. 7ರವರೆಗೆ ಲಾಕ್ಡೌನ್ ಘೋಷಿಸಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಕಿರಾಣಿ, ತರಕಾರಿ ಖರೀದಿಗೆ ಅವಕಾಶ ನೀಡದಿರುವುದು ಸಮಸ್ಯೆಗೆ ಕಾರಣವಾಗಿದೆ.
ಮೇ 22 ಹಾಗೂ 23ರಂದು ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ಎಂಟು ದಿನಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಜನ ಖರೀದಿಸಿದ್ದರು
‘ಮತ್ತೆ ಮೇ 31 ರಿಂದ ಜೂ. 7ರವರೆಗೆ ಲಾಕ್ಡೌನ್ ಘೋಷಣೆ ಮಾಡಲಾಯಿತು. ಅಂಗಡಿ ಮುಂಗಟ್ಟು ಬಂದ್ ಮಾಡಲಾಯಿತು. ಬಡವರು, ಕೂಲಿಕಾರ್ಮಿಕರು, ರೈತರು ಅಗತ್ಯ ವಸ್ತು ಖರೀದಿಗೆ ಪರದಾಡುವಂತಾಯಿತು’ ಎಂದು ದಲಿತ ಮುಖಂಡ ಶಾಂತಪ್ಪ ಬಸರಿಗಿಡದ ದೂರಿದರು.
ಲಾಕ್ಡೌನ್ ಘೋಷಣೆಗೆ ತಮ್ಮ ವಿರೋಧವಿಲ್ಲ. ಆದರೆ ವಾರದಲ್ಲಿ ಒಂದು ದಿನವಾದರೂ ಬೆಳಿಗ್ಗೆ ತರಕಾರಿ, ದಿನಸಿ ಹಾಗೂ ಕಿರಾಣಿ ಸಾಮಗ್ರಿ ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಬೇಕಿತ್ತು ಎಂದರು.
ಹೊಲ, ತೋಟ, ಕಟ್ಟಡ ನಿರ್ಮಾಣ ಹಾಗೂ ಕೂಲಿ ಕೆಲಸ ಮಾಡಿ ಸೋಮವಾರ ದಿನಗೂಲಿ ಪಡೆದುಕೊಂಡು ದಿನಸಿ, ತರಕಾರಿ, ಕಿರಾಣಿ ಸಾಮಗ್ರಿ ಖರೀದಿಸುವ ಬಡವರು ಬಹಳ ಜನ ಇದ್ದಾರೆ. ಈಗ ಅವರಿಗೆ ಕೂಲಿ ಕೆಲಸವೂ ಸಿಗುತ್ತಿಲ್ಲ. ಸಾಲ ಮಾಡಿ ಕಿರಾಣಿ ಖರೀದಿಸಬೇಕು ಎಂದರೆ ಅಂಗಡಿಗಳಿಗೆ ಕೀಲಿ ಹಾಕಲಾಗಿದೆ ಬಡವರು ಏನು ತಿಂದು ಬದುಕುಬೇಕು ಎಂದು ಶಾಂತಪ್ಪ ಪ್ರಶ್ನಿಸಿದರು.
ಅಧಿಕಾರಿಗಳು ಈ ಕಡೆಗೆ ಗಮನಹರಿಸಿ ದಿನಸಿ ಖರೀದಿಗೆ ಸಮಯ ನಿಗದಿ ಪಡಿಸಬೇಕು. ಇಲ್ಲವಾದರೆ ಆಹಾರಧಾನ್ಯದ ಕಿಟ್ ವಿತರಣೆಗೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.