ADVERTISEMENT

ಕೊಪ್ಪಳ: ಖಜಾನೆ ಅಧಿಕಾರಿ ಖಾತೆಗೆ ‘ಸಾಹಿತ್ಯ’ದ ಗರಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಕೊಪ್ಪಳದ ಎ.ಎಂ. ಮದರಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 7:18 IST
Last Updated 9 ಮಾರ್ಚ್ 2025, 7:18 IST
ಎ.ಎಂ. ಮದರಿ
ಎ.ಎಂ. ಮದರಿ   

ಕೊಪ್ಪಳ: ಬದುಕಿನುದ್ದಕ್ಕೂ ಅನುಭವಿಸಿದ ಅವಮಾನಗಳ ಯಾತನೆಯ ಬುತ್ತಿ ಕಟ್ಟಿಕೊಂಡು, ವೃತ್ತಿಯಲ್ಲಿ ಖಜಾನೆ ಅಧಿಕಾರಿಯಾಗಿ ‘ಲೆಕ್ಕ’ದ ಜೊತೆ ಸಾಹಿತ್ಯದಲ್ಲಿಯೂ ಪಕ್ವತೆ ಹೊಂದಿರುವ ಹಿರಿಯ ಲೇಖಕ ಎ.ಎಂ. ಮದರಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿದೆ.

ಸಾಹಿತ್ಯ ವಲಯದಲ್ಲಿ ಅಪಾರ ಸ್ನೇಹಬಳಗ ಹೊಂದಿರುವ ಮದರಿ ಅವರಿಗೆ ಅವರ ಹೆಸರು ಹಿಡಿದು ಗುರುತಿಸುವುದಕ್ಕಿಂತ ಅವರ ಏಕೈಕ ಪುಸ್ತಕ ಗೊಂದಲಿಗ್ಯಾ ಹೆಸರು ಹೇಳಿಬಿಟ್ಟರೆ ಲೇಖಕನ ಹೆಸರು ಸುಲಭವಾಗಿ ಗೊತ್ತಾಗಿಬಿಡುವಷ್ಟು ಖ್ಯಾತಿ ಅವರದ್ದು.

ಮದರಿ ಅವರು ಮೂಲತಃ ವಿಜಯಪುರ ಜಿಲ್ಲೆಯವರು. 1952ರಲ್ಲಿ ಸಿಂದಗಿ ತಾಲ್ಲೂಕಿನ ಮದರಿಯಲ್ಲಿ ಜನಿಸಿ ಅನೇಕ ಏಳುಬೀಳುಗಳ ನಡುವೆ, ಅವರಿವರಿಂದ ನೆರವು ಪಡೆದು ಬಿ.ಎಸ್‌ಸಿ, ಬಿ.ಇಡಿ ಪದವಿ ಪಡೆದರು. ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರಾದರೂ ಕರ್ನಾಟಕ ಟ್ರೇಜರಿ ಸರ್ವಿಸ್ ಪರೀಕ್ಷೆ ಉತ್ತೀರ್ಣರಾಗಿ ಜಿಲ್ಲಾ ಖಜಾನಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು.

ADVERTISEMENT

ಮದರಿ ಅವರು ಹಿಂದೊಮ್ಮೆ ಅನೌಪಚಾರಿಕವಾಗಿ ಮಾತನಾಡುವಾಗ ’ಲೆಕ್ಕದ ಅಧಿಕಾರಿ ಬಳಿ ಯಾರು ಸಾಹಿತ್ಯ ಮಾತನಾಡುತ್ತಾರೆ. ಎಲ್ಲರಿಗೂ ಅವರ ಲೆಕ್ಕ ಪಕ್ಕವಾದರೆ ಸಾಕು ಎನ್ನುವಂಥ ಸ್ಥಿತಿ. ಇಂಥ ಕೆಲಸದ ನಡುವೆಯೂ ಅನೇಕ ಸಾಹಿತ್ಯಪ್ರೇಮಿಗಳು ಸ್ನೇಹಿತರಾದರು. ಸಾಹಿತ್ಯಾಸಕ್ತರು ಬಂದರೆ ಅವರ ಲೆಕ್ಕ ಬೇಗನೆ ಚುಕ್ತಾ ಆಗುತ್ತಿತ್ತು’ ಎಂದಿದ್ದರು.

ಮದರಿ ಅವರು 1993ರಲ್ಲಿ ಕೊಪ್ಪಳದಲ್ಲಿ ನಡೆದ 62ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿಯಾಗಿದ್ದರು. ಈಗ ಇಲ್ಲಿನ ಭಾಗ್ಯನಗರದಲ್ಲಿ ವಾಸವಾಗಿದ್ದಾರೆ. ವಿವಿಧ ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ. ಪ್ರಶಸ್ತಿಗಳನ್ನೂ ನೀಡಿವೆ. ಖಜಾನೆ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿರುವ ಅವರ ಖಾತೆಗೆ ಈಗ ’ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಪ್ರಶಸ್ತಿಯ ಗರಿಯೂ ಸೇರಿದೆ.

‘ಯೋಗ್ಯತೆ ಮೀರಿದ ಪ್ರಶಸ್ತಿ’
‘ಸಾಹಿತ್ಯಕವಾಗಿ ಅನೇಕ ಕೆಲಸ ಮಾಡಿದ್ದರೂ ಕೃತಿಯ ರೂಪಕ್ಕೆ ಇಳಿಸಿ ಪ್ರಕಟಿಸಿದ್ದು ಒಂದೇ ಪುಸ್ತಕ. ಕರ್ನಾಟಕ ರಾಜ್ಯೋತ್ಸವದ ಬಳಿಕ ಈಗ ಮತ್ತೊಂದು ಪ್ರಶಸ್ತಿ ಬಂದಿದ್ದು ಖುಷಿಯಾಗಿದೆ. ಇದು ನನ್ನ ಯೋಗ್ಯತೆ ಮೀರಿ ಬಂದ ಪ್ರಶಸ್ತಿ’ ಎಂದು ಮದರಿ ಅವರು ಸಂತೋಷ ವ್ಯಕ್ತಪಡಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿ ‘ದಶಕದ ಹಿಂದೆ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಬಂದಿತ್ತು. ಅಷ್ಟಕ್ಕೆ ಮಾತ್ರ ಯೋಗ್ಯವೆಂದು ಭಾವಿಸಿದ್ದೆ. ನನ್ನ ಗೊಂದಲಿಗ್ಯಾ ಕೃತಿ ದೊಡ್ಡಮಟ್ಟದಲ್ಲಿ ಪ್ರಚಾರವಾಯಿತು. ವಿಮರ್ಶಕರು ಕೂಡ ಮೆಚ್ಚಿಕೊಂಡರು. ಎಲ್ಲಕ್ಕಿಂತ ಹೆಚ್ಚಾಗಿ ಓದುಗರು ಒಪ್ಪಿಕೊಂಡರು. ಈಗ ಪ್ರಶಸ್ತಿ ಕೂಡ ತಂದುಕೊಟ್ಟಿದೆ. ಇದಕ್ಕಿಂತ ಸೌಭಾಗ್ಯ ಇನ್ನೇನು ಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.