ADVERTISEMENT

ಮೀಸಲಾತಿ ಕಸಿಯುವ ಸಂಚು: ಎಸ್.ಬಿ.ಚಂದ್ರಶೇಖರ್ ಅಭಿಮತ

ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:28 IST
Last Updated 19 ಏಪ್ರಿಲ್ 2021, 4:28 IST
ಕಾರಟಗಿಯಲ್ಲಿ ಭಾನುವಾರ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು
ಕಾರಟಗಿಯಲ್ಲಿ ಭಾನುವಾರ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು   

ಕಾರಟಗಿ: ‘ದೇಶ ಬಂಡವಾಳಶಾಹಿಗಳ ಪಾಲಾಗುತ್ತಿದೆ. ಮೀಸಲಾತಿ ಕಸಿಯುವ ಸಂಚು ನಡೆದಿದೆ. ಚರಿತ್ರೆ ತಿರುಚುವ ಕೆಲಸ ನಡೆದಿದೆ’ ಎಂದು ಉಪನ್ಯಾಸಕ ಎಸ್.ಬಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಬಾಬಾ ಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್ ಅಭಿಮಾನಿಗಳ ಬಳಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ, ದಲಿತ ಸಂಘಟನೆಗಳು ಹಾಗೂ ರೈತ ಪರ ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದ ಕರ್ನಾಟಕ ಪಬ್ಲಿಕ್‌ ಶಾಲೆ ಆವರಣದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಂದೊಂದು ದಿನ ಸ್ವಾತಂತ್ರ್ಯ ಪೂರ್ವ ದಿನಗಳು ಮರುಕಳಿಸುವ ಅಪಾಯವಿದೆ. ನೈಜ ಚರಿತ್ರೆಯನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಬೇಕಿದೆ. ಎಲ್ಲರನ್ನೂ ಜಾಗೃತಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ’ ಎಂದರು.

ADVERTISEMENT

‘ಅಂಬೇಡ್ಕರ್ ಅವರ ಅಭಿಮಾನಿಯಾಗುವ ಬದಲು ಅನುಯಾಯಿಗಳಾಗಬೇಕು’ ಎಂದು ಪ್ರೊ.ರಮೇಶ ಸುಗ್ಗೆನಹಳ್ಳಿ ಹೇಳಿದರು.

ಅಂಬೇಡ್ಕರ್ ಆಲದ ಮರದಂತೆ. ಅದರ ನೆರಳಲ್ಲಿ ಎಲ್ಲರೂ ಬದುಕುತ್ತಿದ್ದೇವೆ. ಅವರ ವಿಚಾರಧಾರೆ, ಚಿಂತನೆಗಳನ್ನು ತಿಳಿಸಬೇಕಾದ ಸಂಕ್ರಮಣ ಕಾಲ ಬಂದಿದೆ ಎಂದರು.

ತುಳಿತಕ್ಕೊಳಗಾದವರ ಪರ, ಎಲ್ಲಾ ಧರ್ಮಗಳು ಒಪ್ಪುವಂಥ ಶ್ರೇಷ್ಠವಾದ ಸಂವಿಧಾನ ರಚಿಸಿ, ವಿಶ್ವದ ಗಮನ ಸೆಳೆದವರು ಅಂಬೇಡ್ಕರ್‌ ಎಂದರು.

ಶಾಸಕರಾದ ಬಸವರಾಜ ದಢೇಸೂಗೂರು ಮಾತನಾಡಿ,‘ಅಂಬೇಡ್ಕರ್‌ ಕೊಡುಗೆ ಬಹು ದೊಡ್ಡದು. ಸಂವಿಧಾನ ನೀಡಿರುವ ಹಕ್ಕುಗಳಿಂದ
ನಾವೆಲ್ಲರೂ ಏಳಿಗೆ ಕಾಣಬೇಕು. ಇತರರ ಏಳಿಗೆಗೆ ಪ್ರೋತ್ಸಾಹ ನೀಡಬೇಕು’ ಎಂದರು.

ಪುರಸಭೆ ಅಧ್ಯಕ್ಷ ಶರಣೇಶ ಸಾಲೋಣಿ ಮಾತನಾಡಿದರು.

ಪರಿಶಿಷ್ಟ ಜಾತಿ ನೌಕರರ ಸಂಘದ ಅಧ್ಯಕ್ಷ ವೆಂಕೋಬ ಚಲವಾದಿ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಶಿವರೆಡ್ಡಿ ನಾಯಕ, ರಮೇಶ ನಾಡಿಗೇರ, ಬೂದಿ ನಾಗರಾಜ, ಹೋರಾಟಗಾರ ಮರಿಯಪ್ಪ ಸಾಲೋಣಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರಮುಖರು ಹಾಗೂ ಯುವಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.