ADVERTISEMENT

ಕೊಪ್ಪಳದ ಅಂಜನಾದ್ರಿಯೇ ಹನುಮನ ಜನ್ಮ ಸ್ಥಳ: ಡಾ.ಶರಣಬಸಪ್ಪ ಕೋಲ್ಕಾರ ಅಭಿಮತ

ಕಿರು ಹೊತ್ತಿಗೆ ಬಿಡುಗಡೆ ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:58 IST
Last Updated 11 ಅಕ್ಟೋಬರ್ 2021, 2:58 IST
ಕೊಪ್ಪಳದ ಬಿ.ಟಿ.ಪಾಟೀಲ ನಗರದಲ್ಲಿ ಡಾ.ಸಿದ್ಲಿಂಗಪ್ಪ ಕೊಟ್ನೆಕಲ್ ಬರೆದ ‘ಕೊಪ್ಪಳದ ಕಿಷ್ಕಿಂಧೆಯ ಅಂಜನಾದ್ರಿ ಪ್ರದೇಶವೇ ಹನುಮನ ಜನ್ಮಸ್ಥಳ; ಒಂದು ಸಮರ್ಥನೆ’ ಎಂಬ ಕಿರುಹೊತ್ತಿಗೆಯನ್ನು ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ ಬಿಡುಗಡೆಗೊಳಿಸಿದರು. ಅಲ್ಲಮಪ್ರಭು ಪಾಟೀಲ, ಬಸವರಾಜ ಪೂಜಾರ, ಡಾ.ಮಹಾಂತೇಶ ಮಲ್ಲನಗೌಡರ, ಜಿ.ಎಸ್.ಗೋನಾಳ, ಹನುಮಂತಪ್ಪ ಅಂಡಗಿ, ರಮೇಶ ಓಜಿನಹಳ್ಳಿ, ಸೋಮನಗೌಡ ಮುಂತಾದವರು ಇದ್ದರು
ಕೊಪ್ಪಳದ ಬಿ.ಟಿ.ಪಾಟೀಲ ನಗರದಲ್ಲಿ ಡಾ.ಸಿದ್ಲಿಂಗಪ್ಪ ಕೊಟ್ನೆಕಲ್ ಬರೆದ ‘ಕೊಪ್ಪಳದ ಕಿಷ್ಕಿಂಧೆಯ ಅಂಜನಾದ್ರಿ ಪ್ರದೇಶವೇ ಹನುಮನ ಜನ್ಮಸ್ಥಳ; ಒಂದು ಸಮರ್ಥನೆ’ ಎಂಬ ಕಿರುಹೊತ್ತಿಗೆಯನ್ನು ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ ಬಿಡುಗಡೆಗೊಳಿಸಿದರು. ಅಲ್ಲಮಪ್ರಭು ಪಾಟೀಲ, ಬಸವರಾಜ ಪೂಜಾರ, ಡಾ.ಮಹಾಂತೇಶ ಮಲ್ಲನಗೌಡರ, ಜಿ.ಎಸ್.ಗೋನಾಳ, ಹನುಮಂತಪ್ಪ ಅಂಡಗಿ, ರಮೇಶ ಓಜಿನಹಳ್ಳಿ, ಸೋಮನಗೌಡ ಮುಂತಾದವರು ಇದ್ದರು   

ಕೊಪ್ಪಳ:ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂಧಾ ಪ್ರದೇಶದ ಅಂಜನಾದ್ರಿ ಪರ್ವತವೇ ರಾಮಾಯಣ ಕಾವ್ಯದ ಹನುಮಂತನ ಜನ್ಮಸ್ಥಳ. ಇದು ಅತ್ಯಂತ ಖಚಿತವಾದ ಚಾರಿತ್ರಿಕ ಸತ್ಯಎಂದು ಡಾ.ಶರಣಬಸಪ್ಪ ಕೋಲ್ಕಾರ ಪ್ರತಿಪಾದಿಸಿದರು.

ಅವರು ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‍ರವರು ರಚಿಸಿದ ‘ಕೊಪ್ಪಳದ ಕಿಷ್ಕಿಂಧೆಯ ಅಂಜನಾದ್ರಿ ಪ್ರದೇಶವೇ ಹನುಮನ ಜನ್ಮಸ್ಥಳ; ಒಂದು ಸಮರ್ಥನೆ’ ಎಂಬ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದರು.

ಮೂಲ ಸತ್ಯ ಘಟನೆಯನ್ನಾಧರಿಸಿ ಶ್ರೀ ವಾಲ್ಮೀಕಿ ಮಹರ್ಷಿಗಳು ರಾಮಾಯಣ ಕಾವ್ಯವನ್ನು ರಚಿಸಿದ್ದಾರೆ. ಹಾಗೆ ರಚಿಸುವಲ್ಲಿ ಕರ್ನಾಟಕದ ಹಂಪಿ-ಆನೆಗೊಂದಿ ಪ್ರದೇಶದಲ್ಲಿ ವಾಸವಿದ್ದ ವಾನರ ಎಂಬ ಬುಡಕಟ್ಟು ಸಮುದಾಯವನ್ನು ಉಲ್ಲೇಖಿಸಿಕೊಂಡಿದ್ದಾರೆ. ವಾನರ ಸಮುದಾಯ ಕಬ್ಬಿಣಯುಗದ ಮೊರೆರೆಂಬ ಸಮುದಾಯವೇ ಆಗಿದೆ. ಇವರು ನಿರ್ಮಾಣ ತಂತ್ರಜ್ಞಾನದಲ್ಲಿ ನೈಪುಣ್ಯತೆಯನ್ನು ಹೊಂದಿದ್ದರು. ಹಾಗಾಗಿ ಸಮುದ್ರಕ್ಕೆ ಸೇತುವೆ ನಿರ್ಮಾಣದಲ್ಲಿ ಇವರ ಸಹಾಯವನ್ನು ರಾಮ-ಲಕ್ಷ್ಮಣರು ಬಳಸಿಕೊಂಡರು ಎಂದು ಅವರು ತಿಳಿಸಿದರು.

ADVERTISEMENT

ವಾನರ ವೀರರಲ್ಲಿ ಒಬ್ಬರಾದ ಹನುಮಂತನು ಅಂಜನಾದ್ರಿಯಲ್ಲಿಯೇ ಜನಿಸಿದ ಎನ್ನಲು ಕೆಲವು ಸಾಹಿತ್ಯಕ ಉಲ್ಲೇಖಗಳು, ಶಿಲಾಶಾಸನಗಳು, ಐತಿಹ್ಯಗಳು, ಗವಿಚಿತ್ರಗಳು, ಪ್ರಾಚ್ಯಾವಶೇಷಗಳು ಪುರಾವೆಗಳಾಗಿವೆ. ಅಂಜನಹಳ್ಳಿ, ಹನುಮನಹಳ್ಳಿ, ಆಂಜನೇಯ ದೇವಾಲಯಗಳು, ಅಪಾರ ಶಿಲ್ಪಗಳು ಇದಕ್ಕೆಲ್ಲಾ ಸಾಕ್ಷಿಯಾಗಿವೆ. ಹಾಗಾಗಿ ತಿರುಪತಿ-ತಿರುಮಲ ಬೆಟ್ಟವೇ ಅಂಜನಾದ್ರಿ ಎಂಬ ವಾದ ಅಸಂಬದ್ಧವಾದದ್ದು ಎಂದು ಪ್ರತಿಪಾದಿಸಿದರು.

ಬಂಡಾಯ ಸಾಹಿತಿಗಳಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ರಾಮಾಯಣ ಮತ್ತು ಮಹಾಭಾರತಗಳು ನಡೆದ ಕಥೆಗಳು ಎನ್ನುವುದಕ್ಕಿಂತ ವಾಸ್ತವಿಕವಾಗಿ ನಡೆಯುತ್ತಿರುವ ಘಟನೆಗಳೇ ಎಂದರೆ ತಪ್ಪಾಗಲಾರದು. ಕವಿ ಯಾವುದನ್ನು ಸೃಷ್ಟಿ ಮಾಡಿಲ್ಲ, ಸೃಷ್ಟಿಯಲ್ಲಿ ನಡೆದ ಘಟನೆಗಳಿಗೆ ಮುಖಾಮುಖಿಯಾಗಿದ್ದಾನೆ. ಪುರಾಣ ಮತ್ತು ಇತಿಹಾಸ ಬೇರೆ, ಬೇರೆ ಎಂದರು.

ರಾಮಾಯಣ ಮತ್ತು ಮಹಾಭಾರತ ದೇಶದ ಎರಡು ಮಹಾಕಾವ್ಯಗಳು. ಅವುಗಳೇ ಇತಿಹಾಸವಲ್ಲ. ಆದರೆ ಹಿಂದೆ ನಡೆದ ಘಟನಾವಳಿಗಳನ್ನೇ ಕವಿ ಕಟ್ಟಿ ಕೊಟ್ಟಿದ್ದಾನೆ. ಇಂದಿಗೂ ರಾಮಾಯಣ, ಮಹಾಭಾರತ ನಮ್ಮ ಮನೆಗಳಲ್ಲಿ ದಾಯಾದಿ ಕಲಹದ ಮೂಲಕ ನಡೆಯುತ್ತಲೇ ಇವೆ ಎಂದರು.

ವಿಜಯನಗರ ವಿವಿ ಸಿಂಡಿಕೇಟ್ ಸದಸ್ಯ ಡಾ.ಬಸವರಾಜ ಪೂಜಾರ,ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಸ್.ಗೋನಾಳ ಮಾತನಾಡಿದರು.ಹಿರಿಯ ಸಾಹಿತಿ ಎ.ಎಂ.ಮದರಿ, ಕಿರು ಹೊತ್ತಿಗೆಯ ಪ್ರಕಟಣಾ ದಾನಿಗಳಾದ ಡಾ.ಮಹಾಂತೇಶ ಮಲ್ಲನಗೌಡರು ಇದ್ದರು. ಸೋಮನಗೌಡ ಪಾಟೀಲ, ಹನುಮಂತಪ್ಪ ಅಂಡಗಿ, ಬಿ.ಜಿ ಕರಿಗಾರ, ಲಕ್ಷ್ಮಣ ಪೀರಗಾರ, ರಾಚಪ್ಪ ಕೇಸರಬಾವಿಇದ್ದರು.

ಅನನ್ಯ ದೇಸಾಯಿಯವರ ಪ್ರಾರ್ಥಿಸಿದರು. ಶಿವನಗೌಡಪೊಲೀಸ್‌ ಪಾಟೀಲ್ ಸ್ವಾಗತಿಸಿದರು. ಮಹೇಶ ಬಳ್ಳಾರಿ ವಂದಿಸಿದರು. ಅಶೋಕ ಓಜಿನಹಳ್ಳಿನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.