ADVERTISEMENT

ಅಂಜನಾದ್ರಿ: ವಾಹನ ನಿಲುಗಡೆ ಸ್ಥಳದಲ್ಲಿ ನಿಗದಿತ ದರಕ್ಕಿಂತ ಅಧಿಕ ಶುಲ್ಕ ವಸೂಲಿ?

ಅಂಜನಾದ್ರಿ ಬೆಟ್ಟದ ವಾಹನ ನಿಲುಗಡೆ ಸ್ಥಳದಲ್ಲಿ ಹಗಲು ದರೋಡೆ: ಆರೋಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 6:23 IST
Last Updated 5 ನವೆಂಬರ್ 2025, 6:23 IST
ಅಂಜನಾದ್ರಿ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳು ನಿಂತಿರುವುದು
ಅಂಜನಾದ್ರಿ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳು ನಿಂತಿರುವುದು   

ಗಂಗಾವತಿ: ಧಾರ್ಮಿಕ ಪುಣ್ಯಕ್ಷೇತ್ರ ಅಂಜನಾದ್ರಿ ಬೆಟ್ಟದ ವಾಹನ ನಿಲುಗಡೆ (ಪಾರ್ಕಿಂಗ್) ಸ್ಥಳದಲ್ಲಿ ತಾಲ್ಲೂಕು ಆಡಳಿತ ನಿಗದಿಪಡಿಸಿದ ದರಕ್ಕಿಂತ ಮೂರು ಪಟ್ಟು ಅಧಿಕ ಶುಲ್ಕವನ್ನು ವಾಹನಗಳ ಮಾಲೀಕರಿಂದ ಗುತ್ತಿಗೆದಾರರು ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ

ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ವಿಶ್ವವಿಖ್ಯಾತಿ ಪಡೆದಿದ್ದು ಶನಿವಾರ, ಭಾನುವಾರ, ಹಬ್ಬ ಸೇರಿ ನಿತ್ಯ ಸಾವಿರಾರು  ಭಕ್ತರು ದ್ವಿಚಕ್ರವಾಹನ, ಕಾರು, ಟಂಟಂ, ಟಾಟಾ ಮ್ಯಾಜಿಕ್, ಬಸ್‌ಗಳಲ್ಲಿ ಅಂಜನಾದ್ರಿಗೆ ಭೇಟಿ ನೀಡುತ್ತಾರೆ. ವಾಹನಗಳು ಸುರಕ್ಷಿತವಾಗಿರಲಿ ಎಂಬ ಕಾರಣ ಪಾರ್ಕಿಂಗ್ ಸ್ಥಳ ನಿಗದಿಪಡಿಸಿ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ.

‘ಟೆಂಡರ್ ಪಡೆದ ಗುತ್ತಿಗೆದಾರ ಪಾರ್ಕಿಂಗ್ ಸ್ಥಳವನ್ನೇ ದಂಧೆಯಾಗಿಸಿಕೊಂಡು ಸವಾರರಿಗೆ ಅಧಿಕ ಶುಲ್ಕ ವಿಧಿಸುತ್ತಾ ಹಗಲು ದರೋಡೆಗೆ ಇಳಿದಿದ್ದಾನೆ. ಸವಾರರು ವಾಹನಗಳ ಸುರಕ್ಷತೆಗಾಗಿ ಅನಿವಾರ್ಯವಾಗಿ ಗುತ್ತಿಗೆದಾರರಿಗೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಾವತಿ ಮಾಡುತ್ತಿದ್ದಾರೆ’ ಎಂದು ಸಾರ್ವಜನಿಕರು ದೂರುತ್ತಾರೆ.

ADVERTISEMENT

₹30.30ಲಕ್ಷಕ್ಕೆ ಟೆಂಡರ್: ಪ್ರತಿವರ್ಷ ಅಂಜನಾದ್ರಿ ಪಾರ್ಕಿಂಗ್ ಸ್ಥಳಕ್ಕೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಟೆಂಡರ್ ಕರೆದು ಹರಾಜು ಪ್ರಕ್ರಿಯೆ ನಡೆಸಿ, ವಾಹನ ನಿಲುಗಡೆ ಸ್ಥಳ ಗುತ್ತಿಗೆಗೆ ನೀಡುತ್ತಾರೆ. ಈ ವರ್ಷ ₹30.30ಲಕ್ಷಕ್ಕೆ ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದ ವೆಂಕಟೇಶ ಎನ್ನುವವರಿಗೆ ಏ.1ರಿಂದ 2026ರ ಮಾರ್ಚ್ 31ರವರೆಗೆ ಪಾರ್ಕಿಂಗ್ ಸ್ಥಳ ಗುತ್ತಿಗೆ ನೀಡಲಾಗಿದೆ.

‘ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಿಗದಿಪಡಿಸಿದ ದರಕ್ಕೆ ವಾಹನಗಳಿಗೆ ನಿಲ್ಲಲು ಅವಕಾಶ ನೀಡಿ, ಶುಲ್ಕವಿಧಿಸಿದರೆ ಟೆಂಡರ್‌ಗೆ ನೀಡಿದ ಹಣ ಸಹ ಸಂಗ್ರಹಿಸಲು ಆಗುವುದಿಲ್ಲ ಎಂದು ಸವಾರರಿಂದ ಗುತ್ತಿಗೆದಾರರು ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ’ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಟೆಂಡರ್ ನಿಯಮಾವಳಿ ಪ್ರಕಾರ ಗುತ್ತಿಗೆದಾರರು ಬಸ್‌ಗೆ ₹30, ಕಾರಿಗೆ ₹20, ಬೈಕ್ ಗಳಿಗೆ ₹10 ಶುಲ್ಕ ವಿಧಿಸಬೇಕು. ಆದರೆ ಗುತ್ತಿಗೆದಾರರು ಕೆಲಸಗಾರರಿಂದ ಬಸ್‌ಗಳಿಗೆ ₹100-₹200, ಕಾರುಗಳಿಗೆ ₹50-₹100ರವರೆಗೆ ಶುಲ್ಕವಿಧಿಸಿ, ನಿತ್ಯ ಸಾವಿರಾರು ರೂಪಾಯಿ ಹಣವನ್ನು ಲಪಟಾಯಿಸುವ ಆರೋಪ ಸಾಮಾನ್ಯವಾಗಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ವಾಹನ ಸವಾರರು ಒತ್ತಾಯಿಸುತ್ತಾರೆ.

ಹೊರ ರಾಜ್ಯದವರೇ ಗುತ್ತಿಗೆದಾರರ ಟಾರ್ಗೆಟ್: ಅಂಜನಾದ್ರಿ ಬೆಟ್ಟಕ್ಕೆ ಮಹಾರಾಷ್ಟ್ರ, ಬಿಹಾರ, ಉತ್ತರಪ್ರದೇಶ, ಗುಜರಾತ್, ಹರಿಯಾಣ, ಅಸ್ಸಾಂ, ಒಡಿಶಾ ಸೇರಿ ಹಲವು ರಾಜ್ಯಗಳ ಜನರು ಬಸ್‌ಗಳ ಮೂಲಕ ಅಂಜನಾದ್ರಿಗೆ ಬರುತ್ತಾರೆ. ಅವರಿಗೆ ಇಲ್ಲಿನ ಕನ್ನಡಭಾಷೆಯ ಬಗ್ಗೆ ಜ್ಞಾನವಿರದ ಕಾರಣ ಪಾರ್ಕಿಂಗ್ ಗುತ್ತಿಗೆದಾರರು ಬಸ್‌, ಕಾರುಗಳ ನಿಲುಗಡೆಗೆ ₹100-₹300ವರೆಗೆ ಶುಲ್ಕ ವಿಧಿಸಿ, ಅಧಿಕ ಹಣ ಪೀಕುತ್ತಾರೆ ಎಂದು ಗುಜರಾತ್‌ ಬಸ್‌ ಚಾಲಕ ಅಮರನಾಥ ಆರೋಪಿಸುತ್ತಾರೆ.

ಪಾರ್ಕಿಂಗ್ ಸ್ಥಳದಲ್ಲಿ ಬಸ್‌ ನಿಲುಗಡೆಗೆ ₹30 ಮಾತ್ರ ಕೊಡುವ ಬಗ್ಗೆ ಸೂಚನಾ ಫಲಕ ಹಾಕಲಾಗಿತ್ತು. ಆದರೆ ಹಣ ಪಡೆಯುವ ಹುಡುಗರು ನನ್ನಿಂದ ಬಲವಂತವಾಗಿ ₹200 ಪಡೆದಿದ್ದಾರೆ
ಕನ್ಹಯ್ಯ ಲಾಲ್ ಬಸ್ ಚಾಲಕ ಮಹಾರಾಷ್ಟ್ರ
ವಾಹನ ನಿಲುಗಡೆ ಸ್ಥಳದಲ್ಲಿ ಸವಾರರಿಂದ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸವಾರರು ಸಾಕ್ಷಿ ಸಮೇತ ದೂರು ಸಲ್ಲಿಸಿದರೆ ಆ ಟೆಂಡರ್ ರದ್ದುಪಡಿಸಿ ಹೊಸದಾಗಿ ಟೆಂಡರ್ ಕರೆಯುತ್ತವೆ
ಯು.ನಾಗರಾಜ ಅಂಜನಾದ್ರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.