ಕುಕುನೂರು: ಬರೀ ಜೋಳ, ತೊಗರಿ, ಹೆಸರು ಬೆಳೆದು ಹೇಳಿಕೊಳ್ಳುವಷ್ಟು ಲಾಭವಿಲ್ಲದ್ದರಿಂದ ತೋಟಗಾರಿಕೆ ಬೆಳೆಯತ್ತ ಮುಖ ಮಾಡಿದ ಶಿವಪ್ಪ ಅವರ ಕುಟುಂಬಕ್ಕೆ ಕೃಷಿ ಬದುಕಲ್ಲಿ ಬಾಳೆ ಬೆಳೆ ಹೊಸ ನಿರೀಕ್ಷೆ ಮೂಡಿಸಿದೆ.
ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯತಿಯ ಕೃಷಿಕರಾದ ಶಿವಪ್ಪ ನಾಗಪ್ಪ ಹುಜರತ್ತಿ ಅವರು ತೋಟಗಾರಿಕೆ ಇಲಾಖೆಯ ಉದ್ಯೋಗ ಖಾತರಿ ಯೋಜನೆಯಡಿ 2020-21ರಲ್ಲಿ ಮೂರುವರೆ ಎಕರೆ ಭೂಮಿಯಲ್ಲಿ 2000 ಬಾಳೆ ಸಸಿ ಬೆಳೆದಿದ್ದಾರೆ.
ಇಗಾಗಲೇ ಒಂದು ಭಾರಿ ಕಟಾವು ಮಾಡಿ 35 ಟನ್ ಬಾಳೆ ಮಾರಾಟ ಮಾಡಿ ₹ 3 ಲಕ್ಷ ಆದಾಯ ಪಡೆದಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಕಟಾವು ಮಾಡುತ್ತಿದ್ದು, ಈ ಬಾರಿಯೂ ಬಂಪರ್ ಬೆಳೆ ಕೈಸಿಗಲಿದೆ. ಇವರು ತೋಟಗಾರಿಕೆ ಇಲಾಖೆಯಿಂದ ಅಂದಾಜು ವೆಚ್ಚ ₹ 1,05,702 ಗಳಲ್ಲಿ 320 ಮಾನವ ದಿನಗಳನ್ನು ಸೃಜಿಸಿ, ಸಸಿಗಳನ್ನು ಖರೀದಿಸಿ ಸಾಮಗ್ರಿ ಮತ್ತು ಕೂಲಿ ವೆಚ್ಛ ಸೇರಿ ₹ 1,05,702ಗಳ ಸೌಲಭ್ಯವನ್ನು ಪಡೆದಿದ್ದಾರೆ. ಈಗ ಎರಡನೇ ಬೆಳೆ ಕೈಗೆ ಬಂದಿದ್ದು, ರೈತನ ಮುಖದಲ್ಲಿ ಖುಷಿ ಮೂಡಿದೆ.
ಕೃಷಿಕ ಶಿವಪ್ಪ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಬಾಳೆ ಬೆಳೆಯುತ್ತಿದ್ದಾರೆ. ಇವರು ಯಾವುದೇ ರಾಸಾಯನಿಕ ಗೊಬ್ಬರದ ಮೊರೆ ಹೋಗದೆ, ಸಗಣಿ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಜೀವಾಮೃತ, ಬಳಕೆ ಮಾಡುವ ಮೂಲಕ ಸಾವಯವ ಕೃಷಿ ಮಾಡುತ್ತಿದ್ದಾರೆ. ಈ ಮುಂಚೆ ಹೆಸರು, ಮೆಕ್ಕೆಜೋಳ, ತೊಗರಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾಗ ಇಷ್ಟೊಂದು ಲಾಭ ಇರಲಿಲ್ಲ. ಈಗ ಕೈತುಂಬ ಹಣ ಸಿಗುತ್ತಿದೆ ಎನ್ನುತ್ತಾರೆ ಶಿವಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.