ADVERTISEMENT

ನಿಷೇಧಿತ ಪಿಎಫ್‌ಐ, ಸಿಎಫ್‌ಐ ಮುಖಂಡರಿಗೆ ಜಾಮೀನು ಮಂಜೂರು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 10:42 IST
Last Updated 29 ಸೆಪ್ಟೆಂಬರ್ 2022, 10:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಪ್ಪಳ: ಎರಡು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾದ (ಪಿಎಫ್‌ಐ) ಇಬ್ಬರು ಮತ್ತು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾದ (ಸಿಎಫ್‌ಐ) ಒಬ್ಬ ಮುಖಂಡರಿಗೆ ಗುರುವಾರ ಜಾಮೀನು ಮಂಜೂರಾಗಿದೆ.

ಪಿಎಫ್‌ಐನ ಗಂಗಾವತಿ ಮತ್ತು ಕೊಪ್ಪಳದ ಮುಖ್ಯ ಸಂಘಟಕ ರಸೂಲ್ ಮಹಮ್ಮದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಲೀಂ ಖಾದ್ರಿ ಮತ್ತು ಸಿಎಫ್‌ಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಸರ್ಫರಾಜ್ ಹುಸೇನ್ ಎಂಬುವವರನ್ನು ಮಂಗಳವಾರ ವಶಕ್ಕೆ ಪಡೆದಿದ್ದ ಪೊಲೀಸರು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಶೋಧ: ಪಿಎಫ್‌ಐ ಹಾಗೂ ಸಿಎಫ್‌ಐ ನಿಷೇಧದ ಬಳಿಕ ಸ್ಥಳೀಯ ತಹಶೀಲ್ದಾರರು ಪೊಲೀಸರ ನೆರವಿನೊಂದಿಗೆ ಪಿಎಫ್‌ಐನ ಅಬ್ದುಲ್ ಕಯೂಮ್‌, ಮಹಮ್ಮದ್‌ ರಸೂಲ್‌, ಸಿಎಫ್‌ಐನ ಸೈಯದ್‌ ಸರ್ಫರಾಜ್‌ ಹಾಗೂ ಚಾಂದ್‌ ಸಲ್ಮಾನ್‌ ಅವರ ಮನೆಗಳಲ್ಲಿ ತಹಶೀಲ್ದಾರ್‌ ಶೋಧ ನಡೆಸಿದರು.

ADVERTISEMENT

‘ಎರಡೂ ಸಂಘಟನೆಗಳಲ್ಲಿ ಇದ್ದವರು ಗಂಗಾವತಿಯ ಬೆರೋನಿ ಮಸೀದಿ ಬಳಿಯ ಒಂದು ಕೊಠಡಿ ಮಾಡಿಕೊಂಡಿದ್ದು, ಪರಸ್ಪರ ಅಲ್ಲಿ ಭೇಟಿಯಾಗುತ್ತಿದ್ದರು. ಶೋಧದ ವೇಳೆ ಅಲ್ಲಿ ಯಾವುದೇ ಅಪಾಯಕಾರಿ ವಸ್ತುಗಳು ಕಂಡು ಬಂದಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.