ಕೊಪ್ಪಳ: ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷಿ ಮತ್ತು ಉಸ್ತುವಾರಿ ಸಚಿವ ಬಿ.ಸಿ ಪಾಟೀಲ ಹೇಳಿದರು.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅವಧಿ ಮೀರಿದ ಬೀಜಗಳ ಮಾಡಲಾಗಿದೆ ಎಂದು ಬೂದಗುಂಪಾ ರೈತರು ದೂರು ನೀಡಿದ್ದರು. ಇಂತಹ ಬೀಜಗಳು ಮಾರಾಟ ಮಾಡಬಾರದು ಎಂದು ನೋಟಿಸ್ ನೀಡಲಾಗಿದೆ. ಮಾರಾಟ ಮಾಡಿದವರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೆ ಉತ್ಪಾದನಾ ಕಂಪನಿ ಮೇಲೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ಕೃಷಿ ಜಾಗೃತ ದಳದವರು ಪ್ರತಿಯೊಂದು ಅಂಗಡಿಗೆ ಪರಿಶೀಲನೆ ಮಾಡಲು ಆಗುವುದಿಲ್ಲ. ದೂರು ನೀಡಲಾದ ಅಂಗಡಿಗಳಿಗೆ ಈಗಾಗಲೇ ಭೇಟಿ ನೀಡಿ, ಪರೀಕ್ಷೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ ಎಂದರು.
ಸರ್ಕಾರಿ ಸ್ವಾಮ್ಯದ ಮಳಿಗೆಗಳಲ್ಲೇ ಈ ರೀತಿ ಕಳಪೆ ಬಿತ್ತನೆ ಬೀಜ, ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಎಲ್ಲ ಬೀಜ ಹಾಗೂ ಗೊಬ್ಬರಗಳನ್ನು ಪರೀಕ್ಷೆ ಮಾಡಿ, ಖರೀದಿಸಲಾಗುವುದಿಲ್ಲ. ಯೂರಿಯಾ ಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದರು.
ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರಿಗೆ ಹಲವು ತಿಂಗಳಿಂದ ಸಂಬಳ ಬಂದಿಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಇರುವುದರಿಂದ ಹಣದ ಕೊರತೆ ಆಗಿದೆ. ಇತ್ತೀಚೆಗೆ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಸಾಲ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ. ಹಾಗಾಗಿ ₹ 33 ಸಾವಿರ ಕೋಟಿ ಸಾಲ ಪಡೆದ ತಕ್ಷಣ ಎಲ್ಲರಿಗೂ ಸಂಬಳ ನೀಡಲಾಗುವುದು ಎಂದರು.
ಜಾನುವಾರುಗಳಲ್ಲಿ ಮುದ್ದೆರೋಗ ಕಾಣಿಸಿಕೊಂಡಿದೆ. ಇದಕ್ಕೂ ಔಷಧ ಇಲ್ಲ ಎಂಬುದಕ್ಕೆ ಉತ್ತರಿಸಿ, ಇದನ್ನು ಜಿಲ್ಲಾಧಿಕಾರಿಗೆ ತಿಳಿಸಿದ್ದೇವೆ. ಅವರು ಕ್ರಮ ವಹಿಸುತ್ತಾರೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾವ ಇಲ್ಲ. ಎಂ.ಟಿ.ಬಿ.ನಾಗರಾಜ, ಆರ್.ಶಂಕರಗೂ ಸಚಿವಸ್ಥಾನ ಸಿಗುತ್ತದೆ. ಯಾವುದೇ ಅನುಮಾನ ಇಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.